ಪಶ್ಚಿಮ ಘಟ್ಟದ ಹಸಿರು ಬೆಟ್ಟಗಳು, ಮಂಜಿನ ಹೊದಿಕೆ, ದಟ್ಟ ಕಾಡು, ಜಲಪಾತಗಳು ಮತ್ತು ಮೋಡಗಳ ನಡುವೆ ಸಾಗುವ ರೋಚಕ ಟ್ರೆಕ್ ಅನುಭವ ಬೇಕಂದ್ರೆ ಕೊಡಚಾದ್ರಿ ನಿಮ್ಮ ಪಟ್ಟಿಯಲ್ಲಿ ಫಸ್ಟ್ ಪ್ಲೇಸ್ ನಲ್ಲಿರಬೇಕು. ಶಿವಮೊಗ್ಗ ಜಿಲ್ಲೆಯ ಈ ಅದ್ಭುತ ಗಿರಿಶಿಖರವು ಕೇವಲ ಚಾರಣಿಗರ ಸ್ವರ್ಗ ಮಾತ್ರವಲ್ಲ, ಪ್ರಕೃತಿ ಮತ್ತು ಆಧ್ಯಾತ್ಮಿಕತೆಯ ಸುಂದರ ಸಂಗಮವೂ ಹೌದು.
ಕೊಡಚಾದ್ರಿ ವಿಶೇಷತೆ ಏನು?
ಸಮುದ್ರ ಮಟ್ಟದಿಂದ ಸುಮಾರು 1,343 ಮೀಟರ್ ಎತ್ತರದಲ್ಲಿರುವ ಕೊಡಚಾದ್ರಿ, ಪಶ್ಚಿಮ ಘಟ್ಟದ ಅತ್ಯಂತ ಆಕರ್ಷಕ ಚಾರಣ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಬೆಟ್ಟದ ಮೇಲಿನಿಂದ ಕಾಣುವ ಹಸಿರು ಕಣಿವೆಗಳು, ಮೋಡಗಳ ಆಟ, ಬೆಳಗಿನ ಸೂರ್ಯೋದಯ ಮತ್ತು ಸಂಜೆ ಸೂರ್ಯಾಸ್ತ ನೋಡುವ ಅನುಭವ ಮರೆಯಲಾಗದು.

ಕೊಡಚಾದ್ರಿಗೆ ಧಾರ್ಮಿಕ ಮಹತ್ವವೂ ಇದೆ. ಆದಿ ಶಂಕರಾಚಾರ್ಯರು ಇಲ್ಲಿ ತಪಸ್ಸು ನಡೆಸಿದ್ದರು ಎಂಬ ನಂಬಿಕೆ ಇದೆ. ಶಿಖರದ ಸಮೀಪದಲ್ಲಿರುವ ಸರ್ವಜ್ಞ ಪೀಠ ಈ ಸ್ಥಳದ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಸಾರುತ್ತದೆ. ಸಮೀಪದಲ್ಲೇ ಇರುವ ಮೂಕಾಂಬಿಕಾ ದೇವಿ ದೇವಸ್ಥಾನಕ್ಕೂ ಈ ಬೆಟ್ಟದೊಂದಿಗೆ ನಂಟಿದೆ.
ಇಲ್ಲಿ ನೋಡಲೇಬೇಕಾದ ಸ್ಥಳಗಳು
- ಸರ್ವಜ್ಞ ಪೀಠ
- ಹಿದ್ಲುಮನೆ ಜಲಪಾತ
- ಮೂಕಾಂಬಿಕಾ ದೇವಸ್ಥಾನ
- ಬೆಟ್ಟದ ಮೇಲಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟ

ಕೊಡಚಾದ್ರಿಗೆ ಹೇಗೆ ಹೋಗುವುದು?
ಕೊಡಚಾದ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ.
- ಬೆಂಗಳೂರುದಿಂದ: ಸುಮಾರು 400 ಕಿ.ಮೀ.
- ಶಿವಮೊಗ್ಗದಿಂದ: ಸುಮಾರು 115 ಕಿ.ಮೀ.
- ಕೊಲ್ಲೂರಿನಿಂದ: ಸುಮಾರು 20 ಕಿ.ಮೀ.
- ಮಂಗಳೂರಿನಿಂದ: ಸುಮಾರು 150 ಕಿ.ಮೀ
ಟ್ರೆಕಿಂಗ್ ಮಾಡೋದು ಹೇಗೆ?
ಮೊದಲು ಕೊಲ್ಲೂರು ಅಥವಾ ನಿಟ್ಟೂರು ತಲುಪಿ, ಅಲ್ಲಿಂದ ಟ್ರೆಕ್ಕಿಂಗ್ ಆರಂಭಿಸಬಹುದು. ಟ್ರೆಕ್ ಮಾರ್ಗದಲ್ಲಿ ದಟ್ಟ ಕಾಡು, ಚಿಕ್ಕ ಹೊಳೆಗಳು ಮತ್ತು ಸುಂದರ ಪ್ರಕೃತಿ ನಿಮ್ಮನ್ನು ಬರಮಾಡಿಕೊಳ್ಳುತ್ತವೆ. ಜೀಪ್ ಮೂಲಕವೂ ಬೆಟ್ಟದ ಮೇಲ್ಭಾಗದವರೆಗೆ ತೆರಳುವ ವ್ಯವಸ್ಥೆ ಲಭ್ಯವಿದೆ.



