ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿ.ಟೆಕ್ ಸೈಬರ್ ಸೆಕ್ಯೂರಿಟಿ ಕೋರ್ಸ್ಗೆ ಪ್ರವೇಶ ಸಿಗದಿದ್ದಕ್ಕೆ ಕೋಪಗೊಂಡ ಅಭ್ಯರ್ಥಿಯೊಬ್ಬ ಐಐಟಿ ಕಾನ್ಪುರದ ಅಧಿಕೃತ ವೆಬ್ಸೈಟ್ಗೆ ಕನ್ನ ಹಾಕಿದ್ದಾನೆ. ಅರ್ಜಿ ಶುಲ್ಕ ಪಾವತಿಸಿ, ಸೂಕ್ತ ದಾಖಲೆ ಹಾಗೂ ಸೈಬರ್ ಕ್ಷೇತ್ರದ ತನ್ನ ಅನುಭವವನ್ನು ಸಲ್ಲಿಸಿದ್ದರೂ, ಆಯ್ಕೆಯ ಹ್ಯಾಕಥಾನ್ನಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ ಎಂದು ಆತ ಆರೋಪಿಸಿದ್ದಾನೆ. ತನಗೆ ಯಾವುದೇ ಹಾನಿ ಮಾಡುವ ಉದ್ದೇಶವಿರಲಿಲ್ಲ, ಕೇವಲ ತನ್ನ ಕೌಶಲ್ಯ ಸಾಬೀತುಪಡಿಸಿ ನ್ಯಾಯಯುತ ಅವಕಾಶ ಗಿಟ್ಟಿಸಿಕೊಳ್ಳಲು ಈ ಹಾದಿ ಹಿಡಿದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾನೆ.
ಕಾನೂನು ಕ್ರಮದ ಬದಲಿಗೆ ಮರುಪರಿಶೀಲನೆಗೆ ಅವಕಾಶ
ಸಾಮಾನ್ಯವಾಗಿ ಇಂತಹ ಹ್ಯಾಕಿಂಗ್ ಘಟನೆಗಳು ನಡೆದಾಗ ಪೊಲೀಸ್ ದೂರು ದಾಖಲಾಗುತ್ತದೆ. ಆದರೆ ಐಐಟಿ ಕಾನ್ಪುರದ ನಿರ್ದೇಶಕರಾದ ಪ್ರೊ. ಮನೀಂದ್ರ ಅಗರ್ವಾಲ್ ಅವರು ಭಿನ್ನವಾಗಿ ಸ್ಪಂದಿಸಿದ್ದಾರೆ. ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸುವ ಬದಲಿಗೆ, ಆತನನ್ನು ನೇರವಾಗಿ ಕ್ಯಾಂಪಸ್ಗೆ ಆಹ್ವಾನಿಸಲು ನಿರ್ಧರಿಸಿದ್ದಾರೆ.
ಪ್ರತಿಭೆ ಸಾಬೀತಾದರೆ ಸಿಗಲಿದೆ ಸೀಟು!
ಅಭ್ಯರ್ಥಿಯ ನೈಜ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಸಂಸ್ಥೆ ಸಜ್ಜಾಗಿದೆ. ಆತ ನಿಜಕ್ಕೂ ಪ್ರತಿಭಾವಂತನಾಗಿದ್ದು, ತನ್ನ ಸೈಬರ್ ಸೆಕ್ಯುರಿಟಿ ಕೌಶಲ್ಯವನ್ನು ಸಾಬೀತುಪಡಿಸಿದರೆ, ಪ್ರವೇಶ ನೀಡುವ ಕುರಿತು ಧನಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯ ಈ ನಿರ್ಧಾರ ಸದ್ಯ ಸೈಬರ್ ಜಗತ್ತಿನಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.



