ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ನಡೆಯುತ್ತಿರುವ ಪ್ರತಿಭಟನೆಗಳ ವಿರುದ್ಧ ಪಾಕಿಸ್ತಾನ ಸರ್ಕಾರ ಕೈಗೊಂಡಿರುವ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಲ್ಲಿನ ಶಾಂತಿಯುತ ನಾಗರಿಕರ ವಿರುದ್ಧ ಪಾಕಿಸ್ತಾನ ಆಡಳಿತ ನಿರ್ದಯವಾಗಿ ಬಲಪ್ರಯೋಗ ನಡೆಸಿದ್ದು, 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಆರೋಪಿಸಿದರು.
‘ಪ್ರತಿಭಟನಾಕಾರರನ್ನು ಶತ್ರುಗಳೆಂದದ್ದು ಖಂಡನೀಯ’
ವಾರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜೈಸ್ವಾಲ್, ಪಾಕ್ ರಕ್ಷಣಾ ಸಚಿವರು ಪ್ರತಿಭಟನಾಕಾರರನ್ನು “ಶತ್ರುಗಳು” ಎಂದು ಕರೆದಿರುವುದು ಅಲ್ಲಿನ ಜನರ ಮೇಲಿನ ಆಡಳಿತದ ನಿರ್ಲಕ್ಷ್ಯ ಮತ್ತು ತಿರಸ್ಕಾರವನ್ನು ತೋರಿಸುತ್ತದೆ ಎಂದು ಹೇಳಿದರು. ಇದೇ ವೇಳೆ, ಭಾರತದ ವಿರುದ್ಧ ಬಳಸಲು ತರಬೇತಿ ನೀಡಿದ್ದ ಉಗ್ರಗಾಮಿಗಳೇ ಈಗ ಪಾಕಿಸ್ತಾನಕ್ಕೆ ತಿರುಗಿಬಿದ್ದಿರುವುದನ್ನು ಪಾಕ್ ಸರ್ಕಾರವೇ ಒಪ್ಪಿಕೊಂಡಿದೆ ಎಂದರು.
ಇದನ್ನೂ ಓದಿ:
ಅಂತಾರಾಷ್ಟ್ರೀಯ ತನಿಖೆಗೆ ಭಾರತದ ಒತ್ತಾಯ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಿಂಸಾಚಾರ, ಅಕ್ರಮ ಹಾಗೂ ಮತದಾನ ಅವ್ಯವಹಾರಗಳ ಆರೋಪಗಳಿಂದ ಕೂಡಿವೆ ಎಂದು ಭಾರತ ತಿಳಿಸಿದೆ. ಅಲ್ಲಿನ ಪರಿಸ್ಥಿತಿಯನ್ನು ಅಂತಾರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಿ, ನಾಗರಿಕರ ಹತ್ಯೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಭಾರತ ಒತ್ತಾಯಿಸಿದೆ.



