ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಷ್ಟ್ರೀಯ ಭದ್ರತೆಗೆ ನೀಡಿರುವ ಅನನ್ಯ ಮತ್ತು ಅತ್ಯುನ್ನತ ಕೊಡುಗೆಯನ್ನು ಪರಿಗಣಿಸಿ, ದೇಶದ ಸುದೀರ್ಘ ಅವಧಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (81) ಗೆ ಇಂದು ಶನಿವಾರ ಪ್ರತಿಷ್ಠಿತ ‘ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದೋವಲ್ಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ತಿಲಕ್ ಸ್ಮಾರಕ ಟ್ರಸ್ಟ್ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದು, ರಾಷ್ಟ್ರೀಯ ಭದ್ರತಾ ರಂಗದಲ್ಲಿ ದೋವಲ್ ಸಾಧನೆ ಅತ್ಯಂತ ಮಹತ್ವದ್ದಾಗಿದೆ ಎಂದು ಕೊಂಡಾಡಿದೆ. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಪುಣ್ಯತಿಥಿಯ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 1 ರಂದು ದೇಶದ ಪ್ರಗತಿಗೆ ಶ್ರಮಿಸಿದ ಗಣ್ಯರಿಗೆ ಈ ಗೌರವವನ್ನು ನೀಡಲಾಗುತ್ತದೆ. 1983 ರಿಂದ ಆರಂಭವಾದ ಈ ಪ್ರಶಸ್ತಿಯನ್ನು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನ್ಮೋಹನ್ ಸಿಂಗ್, ಇಂದಿರಾ ಗಾಂಧಿ ಹಾಗೂ ಶರದ್ ಪವಾರ್ ಅವರಂತಹ ಪ್ರಮುಖ ನಾಯಕರು ಸ್ವೀಕರಿಸಿದ್ದಾರೆ.
ರಕ್ಷಣಾ ರಂಗದ ಚಾಣಕ್ಯ ಅಜಿತ್ ದೋವಲ್:
81 ವರ್ಷದ ಅಜಿತ್ ದೋವಲ್ ಮಿಜೋರಾಂ, ಸಿಕ್ಕಿಂ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಂತಹ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ದೇಶದ ಪ್ರಮುಖ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇಸ್ಲಾಮಾಬಾದ್ ಮತ್ತು ಲಂಡನ್ನಲ್ಲಿ ಭಾರತೀಯ ರಾಯಭಾರ ಕಚೇರಿಗಳಲ್ಲಿ ರಾಜತಾಂತ್ರಿಕ ಪಾತ್ರಗಳನ್ನು ನಿರ್ವಹಿಸಿರುವ ಇವರು, ಭಾರತ-ಚೀನಾ ಗಡಿ ಮಾತುಕತೆಯ ವಿಶೇಷ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ‘ಡೋಕ್ಲಾಮ್ ಬಿಕ್ಕಟ್ಟನ್ನು’ ಶಾಂತಿಯುತವಾಗಿ ಬಗೆಹರಿಸುವಲ್ಲಿ ದೋವಲ್ ಪ್ರಮುಖ ಪಾತ್ರ ವಹಿಸಿದ್ದರು.
ಲೋಕಶಾಹೀರ್ ಅಣ್ಣಾಭಾವು ಸಾಠೆಗೆ ಅಮಿತ್ ಶಾ ನಮನ:
ಇದೇ ವೇಳೆ ಪುಣೆ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸಿದ್ಧ ಮರಾಠಿ ಕವಿ ಮತ್ತು ಸಮಾಜ ಸುಧಾರಕ ಲೋಕಶಾಹೀರ್ ಅಣ್ಣಾಭಾವು ಸಾಠೆ ಜಯಂತಿಯ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು. ಪುಣೆಯ ಸಾರಸಬಾಗ್ ಪ್ರದೇಶದಲ್ಲಿರುವ ಸಾಠೆ ಪ್ರತಿಮೆಗೆ ಅಮಿತ್ ಶಾ ಅವರು ಪುಷ್ಪನಮನ ಸಲ್ಲಿಸಿದರು.
ಇದನ್ನೂ ಓದಿ:
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಸುನೇತ್ರಾ ಪವಾರ್ ಸೇರಿದಂತೆ ಹಲವು ಸ್ಥಳೀಯ ನಾಯಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. 1920ರ ಆಗಸ್ಟ್ 1 ರಂದು ಜನಿಸಿದ ಅಣ್ಣಾಭಾವು ಸಾಠೆ ಮಹಾರಾಷ್ಟ್ರದ ದಲಿತ ಸಾಹಿತ್ಯದ ಪ್ರವರ್ತಕರಾಗಿ ಮತ್ತು ಜನಪದ ಕವಿಯಾಗಿ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.



