ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕ್ಷಣಗಣನೆ ಆರಂಭವಾಗಿದೆ. ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭರದಿಂದ ಸಿದ್ಧತೆಗಳು ಸಾಗುತ್ತಿದ್ದು, ನೂತನ ಸಚಿವರ ಸೇರ್ಪಡೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ ಎಂಬ ಬಲವಾದ ಮಾಹಿತಿ ಲಭ್ಯವಾಗಿದೆ. 20 ಶಾಸಕರನ್ನು ಒಳಗೊಂಡ ಸಚಿವರ ಅಂತಿಮ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿದ್ದು, ಆಕಾಂಕ್ಷಿಗಳಲ್ಲಿ ಎದೆಬಡಿತ ಜೋರಾಗಿದೆ.
ಕೇರಳದಿಂದ ಬೆಂಗಳೂರಿಗೆ ಕೆ.ಸಿ. ವೇಣುಗೋಪಾಲ್:
ಸಚಿವ ಸಂಪುಟದ ಈ ಅಂತಿಮ ಕಸರತ್ತನ್ನು ಮುಗಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ 20 ಶಾಸಕರ ಅಂತಿಮ ಪಟ್ಟಿಯೊಂದಿಗೆ ಇಂದು ಸಂಜೆ ಕೇರಳದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಬೆಂಗಳೂರಿಗೆ ಬಂದ ತಕ್ಷಣ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಹೈಕಮಾಂಡ್ ಸಿದ್ಧಪಡಿಸಿರುವ ಲಿಸ್ಟ್ ಕುರಿತು ಅಂತಿಮ ಸುತ್ತಿನ ಚರ್ಚೆ ನಡೆಸಲಿದ್ದಾರೆ.
ಲಿಫ್ಟ್ ಪಡೆದ ಆಕಾಂಕ್ಷಿಗಳು, ರಾಜಭವನ ಸಜ್ಜು
ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ರಾಜಭವನದ ಗ್ಲಾಸ್ ಹೌಸ್ನಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಾದೇಶಿಕ ಮತ್ತು ಜಾತಿಸಮೀಕರಣವನ್ನು ಸಮತೋಲನದಲ್ಲಿಟ್ಟುಕೊಂಡು ಈ 20 ಸಚಿವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ದೆಹಲಿ ಮಟ್ಟದಲ್ಲಿ ಭಾರಿ ಲಾಬಿ ನಡೆಸಿದ್ದ ಹಿರಿಯ ಶಾಸಕರು ಮತ್ತು ಯುವ ನಾಯಕರಲ್ಲಿ ಯಾರಿಗೆ ಮಂತ್ರಿ ಭಾಗ್ಯ ಸಿಗಲಿದೆ ಎಂಬುದು ಇಂದೇ ಅಧಿಕೃತವಾಗಿ ಹೊರಬೀಳಲಿದೆ.
ಇದನ್ನೂ ಓದಿ:
ವರಿಷ್ಠರ ಕೊನೆಯ ಕ್ಷಣದ ಟ್ವಿಸ್ಟ್?:
ಈಗಾಗಲೇ 20 ಸಚಿವರ ಪಟ್ಟಿಗೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗುತ್ತಿದ್ದರೂ, ಕೊನೆಯ ಕ್ಷಣದಲ್ಲಿ ಯಾರ ಹೆಸರು ಕೈಬಿಡಬಹುದು ಅಥವಾ ಯಾರಿಗೆ ಅನಿರೀಕ್ಷಿತವಾಗಿ ಸ್ಥಾನ ಸಿಗಬಹುದು ಎಂಬ ಆತಂಕ ಮತ್ತು ಕುತೂಹಲ ಕೈ ನಾಯಕರಲ್ಲಿ ಮನೆಮಾಡಿದೆ. ಇಂದು ಸಂಜೆ ಕೆ.ಸಿ. ವೇಣುಗೋಪಾಲ್ ಅವರ ಭೇಟಿಯ ಬಳಿಕ ಅಧಿಕೃತವಾಗಿ ನೂತನ ಸಚಿವರ ಹೆಸರುಗಳು ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ.



