August 5, 2026
Wednesday, August 5, 2026
spot_img

‘ರಾಯರೇ ಆ ಹುಡುಗಿ ಕಾಟದಿಂದ ಕಾಪಾಡು’: ಬೆಳಗಾವಿ ರಾಘವೇಂದ್ರ ಮಠದ ಹುಂಡಿಯಲ್ಲಿ ಸಿಕ್ತು ವಿಚಿತ್ರ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರೀತಿ, ಪ್ರೇಮ, ಸಾಲ ಬಾಧೆ ಅಥವಾ ಕಷ್ಟಗಳಿಂದ ಮುಕ್ತಿ ಸಿಗಲಿ ಎಂದು ದೇವರ ಹುಂಡಿಗೆ ಕಾಣಿಕೆ ಅಥವಾ ಪತ್ರ ಹಾಕುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ವಿಚಿತ್ರ ಭಕ್ತ ತನಗೆ ಹುಡುಗಿ ಕಾಟದಿಂದ ಕಾಪಾಡು ಎಂದು ಪತ್ರ ಬರೆದು ದೇವರ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.

ಹುಂಡಿ ಎಣಿಕೆ ವೇಳೆ ಪತ್ತೆಯಾದ ರಹಸ್ಯ ಪತ್ರ:

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇತ್ತೀಚೆಗೆ ಮಠದ ಸಿಬ್ಬಂದಿ ಹಾಗೂ ಭಕ್ತರು ಸೇರಿ ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. ಕಾಣಿಕೆ ಹಣ, ನೋಟುಗಳನ್ನು ಎಣಿಸುವಾಗ ಮಠದ ಸಿಬ್ಬಂದಿಗೆ ಮಡಚಿದ ಚೀಟಿಯೊಂದು ಸಿಕ್ಕಿದೆ. ಕುತೂಹಲದಿಂದ ಅದನ್ನು ಬಿಚ್ಚಿ ಓದಿದ ಸಿಬ್ಬಂದಿ ಹಾಗೂ ಅಲ್ಲಿದ್ದ ಭಕ್ತರು ಒಂದು ಕ್ಷಣ ಚಕಿತರಾಗಿದ್ದಾರೆ.

ಅನಾಮಧೇಯ ಪತ್ರದಲ್ಲೇನಿದೆ?:

ಆ ಅನಾಮಧೇಯ ಭಕ್ತ ಬರೆದಿರುವ ಪತ್ರದ ಆರಂಭದಲ್ಲಿ ‘ಶ್ರೀ ಗಣಪತಿಯೇ ನಮಃ’ ಹಾಗೂ ‘ಓಂ ಶ್ರೀ ರಾಘವೇಂದ್ರಾಯ ನಮಃ’ ಎಂದು ಭಕ್ತಿಯಿಂದಲೇ ಬರೆಯಲಾಗಿದೆ. ಆದರೆ ಅದರ ಕೆಳಗೆ ತನ್ನ ಅಳಲನ್ನು ತೋಡಿಕೊಂಡಿರುವ ಭಕ್ತ, “ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು, ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು, ರಾಯರೇ ಈ ಕಷ್ಟದಿಂದ ನಮ್ಮನ್ನು ಕಾಪಾಡು. ನಮ್ಮ ಜೊತೆ ರಾಯರಿದ್ದಾರೆ. ಹೀಗಾಗಿ ಅವರಲ್ಲಿ ನನ್ನ ಕಷ್ಟವನ್ನು ಕೇಳಿಕೊಳ್ಳುತ್ತಿದ್ದೇನೆ, ಗುರುಗಳೇ ಆದಿಶಕ್ತಿ ದೇವಿ, ತಂದೆ, ತಾಯಿ ಕಾಪಾಡು” ಎಂದು ಬರೆದು ಕೊನೆಗೆ ಧನ್ಯವಾದಗಳು ಎಂದು ಮುಗಿಸಿದ್ದಾನೆ.

ಇದನ್ನೂ ಓದಿ:

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ:

ಪತ್ರ ಬರೆದಿರುವ ಸಂತ್ರಸ್ತ ಭಕ್ತ ಯಾರು? ಆತನ ಹೆಸರು ಅಥವಾ ವಿಳಾಸ ಏನು ಎಂಬ ಯಾವುದೇ ಸುಳಿವು ಪತ್ರದಲ್ಲಿ ಉಲ್ಲೇಖವಾಗಿಲ್ಲ. ಹುಡುಗಿ ಕೊಟ್ಟ ಟಾರ್ಚರ್‌ನಿಂದ ನೊಂದಿರುವ ಈ ಅನಾಮಧೇಯ ಭಕ್ತನ ವಿಚಿತ್ರ ಹರಕೆ ಪತ್ರದ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ತರಾವರಿ ಕಮೆಂಟ್‌ಗಳ ಮೂಲಕ ಚರ್ಚೆ ಆರಂಭಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !