ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭೋಜನವೆಂದರೆ ಅದು ಅದ್ವೈತ ಸಾಧನೆ. ಊಟ ಮಾಡಿದ ಆಹಾರ ನಮ್ಮೊಳಗೆ, ನಮ್ಮ ರಕ್ತ, ಮೇಧಸ್ಸು, ಚರ್ಮ ಎಲ್ಲವೂ ಆಗಿ, ಅದು ನಾವೇ ಆಗಿ ರೂಪುಗೊಳ್ಳುತ್ತದೆ. ಮೊದಲು ಆಹಾರವೇ ಬೇರೆ ನಾವೇ ಬೇರೆಯಾಗಿರುತ್ತೇವೆ. ಆದರೆ ನಾವು ಸ್ವೀಕರಿಸಿದ ಆಹಾರ ಕಾಲಕ್ರಮೇಣ ಪ್ರತ್ಯೇಕತೆಯನ್ನು ಕಳೆದುಕೊಂಡು ನಾವೇ ಆಗಿ ನಮ್ಮಲ್ಲಿ ಒಂದಾಗುತ್ತದೆ. ನಮ್ಮ ಜನ್ಮವೂ ಹಾಗೆಯೇ, ಭೂಮಿಯಲ್ಲಿ ಎಲ್ಲಾ ಕರ್ಮಗಳನ್ನು ಕಳೆದುಕೊಂಡು, ಆನಂತರ ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಪರಮ ಗುರಿಯಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಗುರುವಾರದ ’ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು.

ಜೀವ – ದೇವಾದ್ವೈತಕ್ಕೆ ಭೋಜನವೆಂಬುದು ತಯಾರಿ. ಇದು ಜೀವ-ಜೀವಾದ್ವೈತವಾಗಿದೆ. ಅದ್ವೈತವಿರುವಲ್ಲಿ ಆನಂದವಿದ್ದು, ಜೀವ-ಜೀವಾದ್ವೈತವಾದ ಭೋಜನವನ್ನು ಸವಿಯುವಾಗಲೂ ಆನಂದವಾಗುತ್ತದೆ. ಸೇವಿಸುವ ಆಹಾರ ನಮ್ಮೋಳಗೆ ಅದ್ವೈತವಾಗದೇ, ನಮ್ಮೊಳಗೆ ಒಂದಾಗದೇ ಇದ್ದಾಗ ಅದೇ ನಮಗೆ ಶತ್ರುವಾಗುತ್ತದೆ. ಅದೇ ಅನಾರೋಗ್ಯಕ್ಕೂ, ಮರಣಕ್ಕೂ ಕಾರಣವಾಗಬಹುದು. ಸೇವಿಸಿದ ಆಹಾರವನ್ನು ನಾವೇ ಜೀರ್ಣಿಸಿಕೊಳ್ಳಬೇಕು. ಅದಿಲ್ಲದಿದ್ದರೆ ಆ ಆಹಾರವೇ ನಮ್ಮನ್ನು ಜೀರ್ಣಗೊಳಿಸುತ್ತದೆ. ಆಯುರ್ವೇದದ ಸೂತ್ರವೂ ಇದನ್ನೇ ಹೇಳುತ್ತದೆ. ಜೀರ್ಣವಾಗದೇ ಉಳಿಯುವ ಆಹಾರವೇ ಸರ್ವ ರೋಗಕ್ಕೂ ಮೂಲ ಎನ್ನಲಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಭೋಜನದಲ್ಲಿ ಜೀವ- ಜೀವ ಸೇರಿದರೆ, ಜೀವನದಲ್ಲಿ ಜೀವ – ದೇವ ಸೇರುವುದಾಗಿದೆ. ಸೇವಿಸಿದ ಆಹಾರ ಸಂಪೂರ್ಣ ಜೀರ್ಣವಾಗಿ ದೇಹದ ಭಾಗವಾದರೆ ಅದು ಭೌತಿಕ ಅದ್ವೈತ. ಆದರೆ ಅನ್ನಂ ಬ್ರಹ್ಮ ಎಂಬ ಭಾವದಲ್ಲಿ ಸೇವಿಸಿದಾಗ ಅದು ಉನ್ನತ ಮಟ್ಟದ ಅದ್ವೈತವಾಗಿದ್ದು, ಅದು ನಮ್ಮನ್ನು ಮುಕ್ತಿಗೇ ಕರೆದುಕೊಂಡು ಹೋಗುವ ಸಾಧನವಾಗುತ್ತದೆ. ಹಾಗೆಯೇ ಮಣ್ಣು ಮರಳುಗಳನ್ನು ಸೇವಿಸಿ ಜೀವನ ಮಾಡಲಾಗದು. ನಾವು ಸೇವಿಸುವ ಆಹಾರಕ್ಕೆ ಜೀವವಿದ್ದು, ಗಿಡಗಳಿಗೆ ಸುಪ್ತವಾದ ಜೀವವಿದೆ. ಅದಕ್ಕೆ ಸಂವೇದನೆಯೂ ಇದೆ. ಒಂದಾಗುವ ವಸ್ತುಗಳಲ್ಲಿ ಸಮಾನತೆ ಬೇಕು ಎಂಬುದು ಸೃಷ್ಟಿಯ ನಿಯಮ. ಹಾಗಾಗಿ ಜಡ ವಸ್ತುವು ಜೀವಕ್ಕೆ ಆಹಾರವಾಗಲು ಸಾಧ್ಯವಿಲ್ಲ. ಜೀವಕ್ಕೆ ಜೀವವಿರುವ ವಸ್ತುವೇ ಆಹಾರವಾಗಬೇಕು ಎಂದು ಶ್ರೀಗಳು ತಿಳಿಸಿದರು.
ದೇಹವೆಂಬ ಯಂತ್ರ ಬೆಳಗಿನ ಹೊತ್ತು ಪೂರ್ಣ ಶಕ್ತಿಯಿಂದ ಕಾರ್ಯಾಚರಿಸಿದರೆ, ಸಂಜೆಯಾಗುತ್ತಿದ್ದಂತೆ ನಿಧಾನವಾಗುತ್ತದೆ. ರಾತ್ರಿ ಅದು ವಿಶ್ರಾಂತಿ ಪಡೆಯುವ ಹೊತ್ತು. ಇಂದಿನ ದಿನಗಳಲ್ಲಿ ರಾತ್ರಿ ವೇಳೆ ಕೆಲಸ ಮಾಡುವ ಪ್ರವೃತ್ತಿ ಇದೆ. ಇದು ನಿಜವಾಗಿ ದೇಹದ ಜೊತೆಗಿನ ಯುದ್ಧವೇ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಧಾರ್ಮಿಕ ಪಂಚಾಂಗ ಸಮಿತಿಯ ಪ್ರೋ. ಶಂಭು ಭಟ್ಟ ಕಡತೋಕ ಹಾಗೂ ವಿದ್ವಾನ್ ಪತಂಜಲಿ ವೀಣಾಕರ ಅವರು ಪ್ಲವಂಗ ನಾಮ ಸಂವತ್ಸರದ ಧಾರ್ಮಿಕಪಂಚಾಂಗದ ಕರಡು ಪ್ರತಿಯನ್ನು ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.

ಸಾಗರ ಹವ್ಯಕ ಮಂಡಲದ ಕೆಳದಿ ಪಶ್ಚಿಮ, ಕೆಳದಿ ಪೂರ್ವ, ಉಳವಿ, ಕ್ಯಾಸನೂರ, ಇಕ್ಕೆರಿ, ಆವಿನಳ್ಳಿ ವಲಯಗಳ ಪರವಾಗಿ ರಮೇಶ ಹಾರೆಗೊಪ್ಪ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುಬ್ರಹ್ಮಣ್ಯ ಚಿಪ್ಳಿ, ರಾಘವೇಂದ್ರ ಹೊಡಬಟ್ಟೆ, ಗೋವಿಂದ ಹೆಗಡೆ, ನಿಖಿಲ್ ಭಟ್, ದಿನ ಪ್ರಧಾನರಾಗಿ ಗಣಪತಿ ಟಿ. ಆರ್. ವರದಾಮೂಲ ದಂಪತಿಗಳು ಉಪಸ್ಥಿತರಿದ್ದರು.



