ಹೊಸದಿಗಂತ ವರದಿ ಹುಬ್ಬಳ್ಳಿ:
ರೈತರಿಗೆ ಬೆಳೆ ಪರಿಹಾರ ಒದಗಿಸಬೇಕು ಎಂಬ ಹೇಳಿಕೆ ನೀಡುವ ನೈತಿಕತೆ ಹಾಗೂ ಅರ್ಹತೆ ಬಿಜೆಪಿಗೆ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ದೇಶದ 16 ಲಕ್ಷ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಹಾಗೆಯೇ ರೈತರ ಸಾಲ ಮನ್ನಾ ಹಾಗೂ ಪರಿಹಾರ ನೀಡಲು ಏನಾಗಿದೆ? ಹಿಂದೆ ರಾಜ್ಯದಲ್ಲಿ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರು ರೈತರ ಸಾಲ ಮನ್ನಾ ಮಾಡುವಂತೆ ವಿರೋಧ ಪಕ್ಷಗಳು ಒತ್ತಾಯಿಸಿದಾಗ ನಮ್ಮ ಹತ್ತಿರ ನೋಟ್ ಮುದ್ರಿತ ಯಂತ್ರವಿಲ್ಲ ಎಂದು ಹೇಳಿದ್ದರು. ಇವರಿಗೆ ರೈತರ ಬಗ್ಗೆ ಮಾತನಾಡಲು ಏನು ನೈತಿಕೆ ಇದೆ ಎಂದು ಪ್ರಶ್ನಿಸಿದರು.
ಈಗ ರೈತರ ಬಗ್ಗೆ ಅನುಕಂಪ ತೋರಿಸುತ್ತಿರುವ ಬಿಜೆಪಿ ನಾಯಕರು ವಿಶ್ವ ಗುರು(ಮೋದಿ) ಅವರ ಹತ್ತಿರ ಹೋಗಿ ಪರಿಹಾರ ತರಲಿ. ರೈತರ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ. ಹಿಂದೆ ಯುಪಿಎ ಸರ್ಕಾರ ಅವಧಿಯಲ್ಲಿ 73 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ 8.5 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ ಎಂದು ತಿಳಿಸಿದರು.
ರೈತರು ಸಲ್ಲಿಸುತ್ತಿರುವುದು ನ್ಯಾಯಯುತ ಬೇಡಿಕೆ. ಆದರೆ ಸದ್ಯ ಬರಗಾಲ ಅಧ್ಯಯನ ಮಾಡುತ್ತಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಮುಂದೆ ಮುಖ್ಯಮಂತ್ರಿ ರೈತರಿಗೆ ಏನು ಪರಿಹಾರ ನೀಡಬೇಕು ಅದನ್ನು ನಿರ್ಧರಿಸಲಿದ್ದಾರೆ. ಆದರೆ ಕೇಂದ್ರ ಸರ್ಕಾರ ದೇಶದಲ್ಲಿ 12 ವರ್ಷಗಳ ಕಾಲವಿದ್ದು, ರೈತರಿಗೆ ಎಷ್ಟು ಪರಿಹಾರ ನೀಡಿದೆ. ರಾಷ್ಟ್ರೀಯ ವಿಪತ್ತು ನಿಧಿ(ಎನ್ಡಿಆರ್ಎಫ್) ಕೆಲವು ನಿಯಮಗಳ ಬದಲಿಸುವಂತೆ, ಬರಗಾಲ ಸೂಕ್ತ ಪರಿಹಾರ ಹಾಗೂ ಬೆಳೆ ವಿಮೆ ಜಾಸ್ತಿ ನೀಡುವಂತೆ ರೈತರು ಮನವಿ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:
ಬೆಳೆ ವಿಮೆ ಕಂಪನಿ ರಾಜ್ಯ ಸರ್ಕಾರ ನಿಯಂತ್ರಣದಲ್ಲಿ ಇಲ್ಲ. ವಿಮೆ ಕಂಪನಿಗಳಿಗೆ ಸಾವಿರಾರೂ ಕೋಟಿ ಲಾಭ ಆಗುತ್ತಿದೆ. ಈ ಬಗ್ಗೆ ಅಧಿವೇಶದಲ್ಲಿ ಚರ್ಚೆ ನಡೆದಿದೆಯಾ? ಸೂಕ್ತ ಕ್ರಮ ಕೈಗೊಳ್ಳುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.



