ಹೊಸದಿಗಂತ ವರದಿ ಬೆಳಗಾವಿ:
ವ್ಯವಹಾರಿಕ ಹಾಗೂ ಸಾಂಸ್ಕೃತಿಕವಾಗಿ ಬೆಳಗಾವಿ ಮತ್ತು ಗೋವಾ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಸೌಹಾರ್ಧ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಬೇಕು ಎಂದು ಗೋವಾ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷೆ ಪ್ರತಿಮಾ ಧೋಂಡ್ ಹೇಳಿದರು.
ನಗರದ ಉದ್ಯಮಬಾಗದಲ್ಲಿರುವ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿಸಿಸಿಐ) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಳಗಾವಿ ಮತ್ತು ಗೋವಾ ನಡುವೆ ನೆರೆಹೊರೆಯ ರಾಜ್ಯಗಳ ನಡುವಿನ ಆತ್ಮೀಯ ಸಂಬಂಧವಿದೆ. ಬೆಳಗಾವಿಯ ಅನೇಕ ಉದ್ಯಮಿಗಳು ಗೋವಾದಲ್ಲಿಯೂ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿದ್ದಾರೆ. ಉದ್ಯಮಾಭಿವೃದ್ಧಿ, ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡೂ ರಾಜ್ಯಗಳ ನಡುವೆ ಉತ್ತಮ ಸಹಕಾರವಿದೆ. ಗೋವಾ ಚೆಂಬರ್ ಕೂಡ ಬಿಸಿಸಿಐ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದೆ ಎಂದು ಅವರು ಹೇಳಿದರು.
ವಾಣಿಜ್ಯೋದ್ಯಮ ಸಂಘಗಳು ಬದ್ಧತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡುವ ಸಂಸ್ಥೆಗಳಾಗಿವೆ. ಇಂತಹ ಸಂಸ್ಥೆಗಳಲ್ಲಿ ಜವಾಬ್ದಾರಿ ವಹಿಸುವವರು ತಮ್ಮ ಸಮಯವನ್ನು ಮೀಸಲಿಟ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಬೆಳಗಾವಿ ಚೆಂಬರ್ ಉತ್ತಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ತಾನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಈ ಹಿಂದೆಯೂ ಬಿಸಿಸಿಐ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ ಹಾಗೂ ಸ್ವಾಗತಾರ್ಹ ಬೆಳವಣಿಗೆ ಎಂದು ಪ್ರತಿಮಾ ಧೋಂಡ್ ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಪದಾಧಿಕಾರಿಗಳ ಪದಗ್ರಹಣ
ಸಮಾರಂಭದಲ್ಲಿ ಸ್ವಪ್ನಿಲ್ ಶಹಾ ಅವರು ಬಿಸಿಸಿಐ ನೂತನ ಅಧ್ಯಕ್ಷರಾಗಿ ಹಾಗೂ ಮನೋಜಕುಮಾರ್ ಎನ್. ಮತ್ತಿಕೊಪ್ಪ ಗೌರವ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಉದಯ ಜೋಶಿ ಹಿರಿಯ ಉಪಾಧ್ಯಕ್ಷರಾಗಿ, ರಾಜೇಂದ್ರ ಮುತಗೆಕರ್ ದ್ವಿತೀಯ ಉಪಾಧ್ಯಕ್ಷರಾಗಿ, ವಿನಿತ್ ಹರಕುಣಿ ಜಂಟಿ ಕಾರ್ಯದರ್ಶಿಯಾಗಿ ಹಾಗೂ ರಮೇಶ್ ಲದ್ದಡ್ ಖಜಾಂಚಿಯಾಗಿ ಪದಗ್ರಹಣ ಮಾಡಿದರು.
2026–27ನೇ ಸಾಲಿನ ಆಡಳಿತ ಮಂಡಳಿ ಸದಸ್ಯರಾಗಿ ಸಂಜೀವ್ ಕತ್ತಿಶೆಟ್ಟಿ, ರೋಹಿತ್ ಎಸ್. ಕಪಾಡಿಯಾ, ವಿಕ್ರಂ ಜೈನ್, ಪ್ರಶಾಂತ್ ಕಳ್ಳಿಮನಿ, ಅಪ್ಪಾಸಾಹೇಬ್ ಗುರವ್, ಸಂಜಯ್ ಪೋದ್ದಾರ್, ವಿಜಯ್ ದರಗಶೆಟ್ಟಿ, ಸಚಿನ್ ಹಂಗಿರ್ಗೇಕರ್, ವೈಭವ್ ವೆರ್ಣೇಕರ, ಎಂ.ಕೆ. ಹೆಗಡೆ, ನಿತಿನ್ ಪೊರ್ವಾಲ್, ಸುಧೀರ್ ಡಿ. ಚೌಗುಲೆ, ಸಚಿನ್ ಸಬ್ನಿಸ್, ಸತೀಶ್ ಕುಲಕರ್ಣಿ, ರಾಜೇಶ್ ಮುಚಂಡಿಕರ್, ಅಶೋಕ್ ಕೋಳಿ, ಆನಂದ ದೇಸಾಯಿ, ಸಂದೀಪ್ ಬಾಗೇವಾಡಿ, ದಯಾನಂದ ನೇತಲ್ಕರ್ ಹಾಗೂ ಬಸವರಾಜ್ ರಾಂಪುರೆ ಅವರು ಅಧಿಕಾರ ಸ್ವೀಕರಿಸಿದರು.
ಸಂಗೀತಾ ಕಟಾರಿಯಾ ಪ್ರಾರ್ಥನೆ ಹಾಡಿದರು. ನಿರ್ಗಮಿತ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸ್ವಾಗತಿಸಿ, ತಮ್ಮ ಅವಧಿಯಲ್ಲಿ ಕೈಗೊಂಡ ಪ್ರಮುಖ ಕಾರ್ಯಚಟುವಟಿಕೆಗಳು ಹಾಗೂ ಸಾಧನೆಗಳ ಕುರಿತು ವಿವರಿಸಿದರು. ನಿರ್ಗಮಿತ ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ವಾರ್ಷಿಕ ವರದಿ ವಾಚಿಸಿದರು. ಅನಿತಾ ಕಣಬರ್ಗಿ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ರಾಜೇಂದ್ರ ಮುತಗೆಕರ್ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಪರಿಚಯಿಸಿದರು. ಅಭಿಷೇಕ ಮುತಗೆಕರ್ ಕಾರ್ಯಕ್ರಮ ನಿರೂಪಿಸಿದರು. ನೂತನ ಗೌರವ ಕಾರ್ಯದರ್ಶಿ ಮನೋಜ್ ಮತ್ತಿಕೊಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಸಿಸಿಐನ ಮಾಜಿ ಅಧ್ಯಕ್ಷರು, ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಉದ್ಯಮಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.



