August 10, 2026
Monday, August 10, 2026
spot_img

ಭಾರತೀಯನಾಗಿರುವುದರಲ್ಲಿ ತಪ್ಪೇನಿದೆ? ದೇಶಪ್ರೇಮ, ಸಿನಿಮಾಗಳ ಮೇಲಿನ ಆರೋಪಕ್ಕೆ ಮಾಧವನ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ ‘ಧುರಂಧರ್’ ಹಾಗೂ ‘ರಾಕೆಟ್ರಿ’ ಸಿನಿಮಾಗಳ ಮೇಲೆ ಪ್ರೊಪಗಾಂಡಾ ಮತ್ತು ರಾಜಕೀಯ ಪ್ರಚಾರದ ಆರೋಪಗಳು ಬಂದಿದ್ದವು. ಈ ವಿಮರ್ಶೆಗಳಿಗೆ ನಟ ಹಾಗೂ ನಿರ್ದೇಶಕ ಆರ್. ಮಾಧವನ್ ನೇರ ಮತ್ತು ಸ್ಪಷ್ಟ ಉತ್ತರ ನೀಡಿದ್ದಾರೆ. “ಭಾರತೀಯನಾಗಿರುವುದು ಅಥವಾ ದೇಶದ ಹಿರಿಮೆಯನ್ನು ಎತ್ತಿಹಿಡಿಯುವುದು ಎಂದಿಗೂ ತಪ್ಪಾಗಲು ಸಾಧ್ಯವಿಲ್ಲ” ಎಂದು ಅವರು ಖಡಕ್ ಆಗಿ ಉತ್ತರಿಸಿದ್ದಾರೆ.

ಬಾಲ್ಯದ ಮೌಲ್ಯಗಳು ಹಾಗೂ ನಾಗರಿಕ ಕರ್ತವ್ಯ

ತಮ್ಮ ಸಿನಿಮಾ ಹಾಗೂ ಪಾತ್ರಗಳ ಆಯ್ಕೆಯ ಬಗ್ಗೆ ಮಾತನಾಡಿದ ಮಾಧವನ್, “ಪ್ರತಿಯೊಬ್ಬ ವ್ಯಕ್ತಿಯು ಆತನ ಬಾಲ್ಯದ ವಾತಾವರಣದಿಂದ ರೂಪುಗೊಳ್ಳುತ್ತಾನೆ. ಚಿಕ್ಕಂದಿನಿಂದಲೂ ನನಗೆ ದೇಶದ ಹಿತವೇ ಮುಖ್ಯ ಎಂಬುದನ್ನು ಕಲಿಸಲಾಗಿದೆ,” ಎಂದಿದ್ದಾರೆ. ಯಾವುದೇ ರಾಜಕೀಯ ಪಕ್ಷದ ವಿರುದ್ಧ ಮಾತನಾಡುವುದಾಗಲಿ ಅಥವಾ ನಾಯಕರನ್ನು ವೈಯಕ್ತಿಕವಾಗಿ ನಿಂದಿಸುವುದಾಗಲಿ ತಮ್ಮ ಅಭ್ಯಾಸವಲ್ಲ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿ ಅಥವಾ ಮುಖ್ಯಮಂತ್ರಿಗೆ ಗೌರವ ನೀಡುವುದು ಮತ್ತು ಬೆಂಬಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅವರು ಬಲವಾಗಿ ನಂಬಿದ್ದಾರೆ.

ಪಾತ್ರಗಳ ಆಯ್ಕೆ ಹಾಗೂ ನಟನೆಯ ನೈಜತೆ

ಚಿತ್ರರಂಗದಲ್ಲಿ ನಟನಾಗಿ ಪ್ರತಿಯೊಂದು ಪಾತ್ರಕ್ಕೂ ನೈಜ್ಯವಾಗಿರುವುದು ತಮ್ಮ ಜವಾಬ್ದಾರಿ ಎಂದು ಮಾಧವನ್ ತಿಳಿಸಿದ್ದಾರೆ. ‘ರಾಕೆಟ್ರಿ’ ಸಿನಿಮಾದಲ್ಲಿ ನಂಬಿ ನಾರಾಯಣನ್ ಅವರ ದೇವರ ಮೇಲಿನ ನಂಬಿಕೆಯನ್ನು ನೈಜವಾಗಿ ತೋರಿಸಿದಂತೆಯೇ, ಮುಂಬರುವ ‘ಜಿಡಿಎನ್’ ಸಿನಿಮಾದಲ್ಲಿ ದೇವರಿಲ್ಲ ಎನ್ನುವ ಸಿದ್ಧಾಂತ ಹೊಂದಿದ್ದ ಜಿ.ಡಿ. ನಾಯ್ಡು ಅವರ ಪಾತ್ರಕ್ಕೂ ಅಷ್ಟೇ ನೈಜತೆಯನ್ನು ನೀಡಲಾಗುತ್ತಿದೆ ಎಂದರು.

ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳ ಸತ್ಯಾಸತ್ಯತೆ

ಸೋಷಿಯಲ್ ಮೀಡಿಯಾದಲ್ಲಿ ಬರುವ ನಕಾರಾತ್ಮಕ ಕಮೆಂಟ್‌ಗಳು ತಮ್ಮ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದಿರುವ ಅವರು, ನಕಲಿ ಕಮೆಂಟ್ ಗಳು ಹಾಗೂ ಹಣ ಪಡೆದು ಟ್ರೋಲ್ ಮಾಡುವ ಅಕೌಂಟ್‌ಗಳನ್ನು ಗುರುತಿಸುವುದು ಸುಲಭ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !