August 11, 2026
Tuesday, August 11, 2026
spot_img

ಬರಗಾಲ ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ: ಬೆಳೆ ಹಾನಿ ಆತಂಕದ ನಡುವೆ ಸಚಿವ ಈಶ್ವರ ಖಂಡ್ರೆ ಭರವಸೆ

ಹೊಸದಿಗಂತ ವರದಿ ಬೀದರ್:

ಬೀದರ್ ಜಿಲ್ಲೆಯಲ್ಲಿ ಜೂನ್, ಜುಲೈ ತಿಂಗಳಲ್ಲಿ ಮಳೆಯ ಆಭಾವದಿಂದಾಗಿ ಉದ್ದು, ಹೆಸರು ಬೇಳೆಗಳು ಶೇ. 95 ರಷ್ಟು ಹಾನಿಯಾಗಿದ್ದು, ಸೋಯಾಬೀನ್ ಹಾಗೂ ತೊಗರಿ ಬೆಳೆಗಳು ಶೇ. 50ರಷ್ಟು ಹಾಳಾಗಿವೆ. ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಇದ್ದು, ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದರು.

ಅವರು ಇಂದು ಜಿಲ್ಲೆಯಲ್ಲಿ ವಿವಿಧ ಭಾಗಗಳಿಗೆ ತೆರಳಿ ಬರದ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಬೀದರ್ ತಾಲೂಕಿನ ಅಷ್ಟೂರ, ಚೋಂಡಿ, ಚೌಳಿ, ಭಾಲ್ಕಿ ತಾಲೂಕಿನ ಅಹಮದಾಬಾದ್, ಕಮಲನಗರದ ಸಂಗಮ, ಹೋಳಸಮುದ್ರ ಹಾಗೂ ಡಿಗ್ಗಿ ಗ್ರಾಮಗಳ ರೈತರ ಹೊಲಗಳಿಗೆ ತೆರಳಿ ರೈತರಿಗೆ ಉಂಟಾದ ಸಂಕಷ್ಟದ ಮಾಹಿತಿ ಪಡೆದರು.

ರೈತರಿಂದ ನೇರವಾಗಿ ಸಮಸ್ಯೆಗಳನ್ನು ಆಲಿಸಿದ ಸಚಿವರು ಯಾವುದೇ ರೈತರು ಆತಂಕ ಪಡುವ ಅಗತ್ಯವಿಲ್ಲ ಸರ್ಕಾರವು ರೈತರ ಪರವಾಗಿ ನಿಂತಿದೆ ರೈತರ ಎಲ್ಲಾ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲಿದೆ ಎಂದರು. ಬೆಳೆ ಹಾನಿ ಕುರಿತು ಸ್ಥಳದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ರೈತರಿಗೆ ಅಗತ್ಯ ನೆರವು ನೀಡುವ ಕುರಿತು ಚರ್ಚಿಸಿದರು. ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ನಡೆಸುವಂತೆ ಹಾಗೂ ಬೆಳೆ ಕಟಾವು ಪ್ರಯೋಗ ಕೈಗೊಳ್ಳುವಂತೆ ಸೂಚಿಸಿದರು.

ಬರ ಪರಿಹಾರ ಕುರಿತು ಕ್ರಮಗಳ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸಚಿವರು ಸೂಚಿಸಿದರು. ಚೋಂಡಿ ಗ್ರಾಮದ ರೈತ ಸಿದ್ದಪ್ಪ 3 ಎಕ್ಕರೆ ಹೊಲದಲ್ಲಿ ಬೆಳೆದ ಹೆಸರು ಮಳೆಯ ಭಾವದಿಂದ ಕುಂಠಿತಗೊಂಡಿದ್ದನ್ನು ವೀಕ್ಷಿಸಿದ ಸಚಿವರು ಪರಿಶಿಷ್ಟ ಜಾತಿಯ ಅಭಿವೃದ್ಧಿ ನಿಗಮದ ಕೊಳವೆ ಭಾವಿ ಮಂಜೂರು ಮಾಡುವದಾಗಿ ಭರವಸೆ ನೀಡಿದರು. ನಂತರ ಸಚಿವರು ಸುಭಾಷ್ ಹಾಗೂ ಗುರುಪಾದಯ್ಯ ರೈತರ ಜಮೀನಿನಲ್ಲಿ ಕುಂಠಿತಗೊಂಡ ಹೆಸರು ಮತ್ತು ಉದ್ದು ಬೆಳೆಗಳನ್ನು ವೀಕ್ಷಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು, ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಈಗಾಗಲೇ ಹೆಸರು ಉದ್ದು ಶೇ. 95 ರಷ್ಟು ಹಾನಿಯಾಗಿದ್ದು, ಸೋಯಾಬಿನ್ ಹಾಗೂ ತೊಗರಿ ಬೇಳೆಗಳು ಸ್ವಲ್ಪ ಮಟ್ಟಿಗೆ ಹಾಳಾಗಿವೆ ಎಂದು ಹೇಳಿದರು. ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಇದೆ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧವಿದೆ. ಕಳೆದ ವರ್ಷ ರೈತರಿಗೆ 246 ಕೋಟಿ ಹಣ ನೇರವಾಗಿ ಜಮೆಯಾಗಿದ್ದು, 270 ಕೋಟಿ ರೂ. ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಹಣ ರೈತರಿಗೆ ನೀಡಲಾಗಿದೆ. ಈ ವರ್ಷ ಬೆಳೆ ಹಾನಿಗೆ ಸರ್ಕಾರವು ಪರಿಹಾರ ನೀಡಲಿದೆ. ಬರ ಘೋಷಣೆ ಕುರಿತು ಸರ್ಕಾರದ ಮಾನದಂಡಗಳಿವೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದೆಂದರು.

ಇದನ್ನೂ ಓದಿ:

ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ತಕ್ಷಣವೇ ಪರಿಹರಿಸಲಾಗುವುದು. ಕಳೆದ ವರ್ಷ 4 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ವರ್ಷ 6 ಕೋಟಿ ರೂ. ಹಣ ನೀಡಲಾಗುವುದು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಅನುದಾನವಿದೆ ಎಂದು ತಿಳಿಸಿದರು.

ಬೀದರ್ ಜಿಲ್ಲೆಯಲ್ಲಿ ವಿ.ಬಿ.ಜಿ. ರಾಮ್ ಜಿ ಯೋಜನೆ ಅಡಿ ಒಟ್ಟು 30,000 ಜನಕ್ಕೆ ಉದ್ಯೋಗ ನೀಡಲಾಗುತ್ತಿದೆ ಅವರವರ ಗ್ರಾಮದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ನೀಡಲಾಗುವುದು. ಯಾರು ಬೇರೆ ಜಿಲ್ಲೆಗಳಿಗೆ ರಾಜ್ಯಗಳಿಗೆ ವಲಸೆ ಹೋಗಬಾರದು ಉದ್ಯೋಗ ಖಾತ್ರಿ ಅಡಿ ಜಿಲ್ಲೆಯಲ್ಲಿ ಈವರೆಗೆ 48 ಕೋಟಿ ರೂ ಕಾಮಗಾರಿ ಆಗಿದ್ದು ಶೀಘ್ರವೇ ಅನುದಾನ ಬಿಡುಗಡೆ ಆಗಲಿದೆ ಎಂದರು.

ಅಷ್ಟೂರು ಗ್ರಾಮದಲ್ಲಿ ಸಚಿವರು ವಿ.ಬಿ.ಜಿ.ರಾಮ್.ಜಿ ಉದ್ಯೋಗ ಖಾತ್ರಿ ಯೋಜನೆ ಅಡಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಕೆಲವರಿಗೆ ಜಾಬ್ ಕಾರ್ಡ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಶಾಸಕ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !