ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಇತಿಹಾಸ ಬರೆದಿದ್ದಾರೆ. ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಇಂದು ಸತತ 13ನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡುವ ಮೂಲಕ, ಭಾರತದ ಇತಿಹಾಸದಲ್ಲೇ ಈ ಮೈಲಿಗಲ್ಲು ತಲುಪಿದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ನೆಹರು ನಂತರದ ದಾಖಲೆ
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸತತ 17 ಬಾರಿ (1947 ರಿಂದ 1963) ಕೆಂಪುಕೋಟೆಯ ಮೇಲೆ ಭಾಷಣ ಮಾಡಿ ಅತಿ ದೀರ್ಘಾವಧಿಯ ದಾಖಲೆ ಹೊಂದಿದ್ದಾರೆ. ಅವರ ನಂತರ ಸತತ 13 ಬಾರಿ ಭಾಷಣ ಮಾಡಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ. ಈ ಮೂಲಕ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ದಾಖಲೆಯನ್ನು ಮೀರಿದ್ದಾರೆ. ಇಂದಿರಾ ಗಾಂಧಿ ಅವರು 1966 ರಿಂದ 1976 ರವರೆಗೆ ಸತತ 11 ಬಾರಿ ಸ್ವಾತಂತ್ರ್ಯ ದಿನದ ಭಾಷಣಗಳನ್ನು ಮಾಡಿದ್ದರು. ಪ್ರಧಾನಿ ಮೋದಿ ಅವರು 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ವರ್ಷವೂ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಸ್ವದೇಶಿ ತೋಪುಗಳ ಗೌರವ ವಂದನೆ
ಪ್ರಧಾನಿ ಅವರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ, ಸಮಾರಂಭದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ 21 ಕುಲಾವಾರು ತೋಪುಗಳ ಗೌರವ ವಂದನೆ ಸಲ್ಲಿಸಲಾಯಿತು. ಈ ಬಾರಿ ಸಂಪೂರ್ಣ ಸ್ವದೇಶಿ ನಿರ್ಮಿತ 105 ಎಂಎಂ ಲೈಟ್ ಫೀಲ್ಡ್ ಗನ್ಗಳನ್ನು ಬಳಸಲಾಗಿತ್ತು. ಈ ಗೌರವ ವಂದನೆಯನ್ನು 1721 ಫೀಲ್ಡ್ ಬ್ಯಾಟರಿಯ ಸೈನಿಕರು ಯಶಸ್ವಿಯಾಗಿ ನಿರ್ವಹಿಸಿದರು.

‘ಪ್ರತಿಯೊಬ್ಬರ ಮನದಲ್ಲೂ ತಿರಂಗಾ’
ತಮ್ಮ ಭಾಷಣದಲ್ಲಿ ದೇಶದ ಏಕತೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ಇಂದು ಪ್ರತಿಯೊಬ್ಬ ಭಾರತೀಯನ ಹೃದಯವೂ ವಂದೇ ಮಾತರಂ ಧ್ವನಿಗೆ ಮಿಡಿಯುತ್ತಿದೆ. ಇಂದು ದೇಶದ ಪ್ರತಿಯೊಂದು ಮನೆಯೂ ತಿರಂಗಾ ಆಗಿದೆ, ಪ್ರತಿಯೊಬ್ಬರ ಮನವೂ ತಿರಂಗಾ ಆಗಿದೆ” ಎಂದು ಹೆಮ್ಮೆಯಿಂದ ಹೇಳಿದರು. ಇದರೊಂದಿಗೆ, 2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ದೇಶದ ನಾಗರಿಕರು ದೊಡ್ಡ ಕನಸುಗಳೊಂದಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.



