ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ಈ ಮಹತ್ವದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಯುವಶಕ್ತಿ ಹಾಗೂ ಹಸಿರು ಸಂಪತ್ತನ್ನು ವೃದ್ಧಿಸುವ ನಿಟ್ಟಿನಲ್ಲಿ ಎರಡು ದೊಡ್ಡ ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ. “ಯುವಜನರು ಈ ದೇಶದ ಭವಿಷ್ಯ. ಭಾರತದ ಅಭಿವೃದ್ಧಿಯ ರಥಕ್ಕೆ ಕರ್ನಾಟಕದ ಯುವಶಕ್ತಿ ಪ್ರಮುಖ ಚಕ್ರಗಳಿದ್ದಂತೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವೈಜ್ಞಾನಿಕ ಮತ್ತು ದೇಶಾಭಿಮಾನದ ಮನೋಭಾವಕ್ಕೆ ‘ಯುವ ಸಂಘ’
ನಾಡಿನ ಯುವಜನತೆಯಲ್ಲಿ ವೈಜ್ಞಾನಿಕ ಮನೋಭಾವ, ನಾಯಕತ್ವದ ಗುಣಗಳು ಹಾಗೂ ದೇಶಾಭಿಮಾನವನ್ನು ಸಣ್ಣ ವಯಸ್ಸಿನಿಂದಲೇ ಬೆಳೆಸುವ ಉದ್ದೇಶದಿಂದ ರಾಜ್ಯಾದ್ಯಂತ ‘ಭಾರತ್ ಜೋಡೋ ಯುವ ಸಂಘಗಳನ್ನು’ ಸ್ಥಾಪಿಸಲಾಗುತ್ತಿದೆ. ಈ ಸಂಘಗಳು ಯುವಕರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಪ್ರೇರಣೆ ನೀಡಲಿವೆ ಎಂದರು.
‘ತೇಗದ ಸಿರಿ’ ಮೂಲಕ 10 ಕೋಟಿ ಗಿಡಗಳ ನೆಡುವಿಕೆ
ಪರಿಸರ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಹಸಿರು ಸಂಪತ್ತನ್ನು ಕೊಡುಗೆಯಾಗಿ ನೀಡಲು ಸ್ವಾತಂತ್ರ್ಯ ದಿನಾಚರಣೆಯ ಸುದಿನದಂದು ‘ತೇಗದ ಸಿರಿ’ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 10 ಕೋಟಿ ತೇಗದ ಗಿಡಗಳನ್ನು ಬೆಳೆಸುವ ಬೃಹತ್ ಗುರಿಯನ್ನು ಹೊಂದಲಾಗಿದೆ ಎಓದು ತಿಳಿಸಿದರು.
ಇದನ್ನೂ ಓದಿ:
ದೇಶಕ್ಕೇ ಮಾದರಿಯಾದ ಕರ್ನಾಟಕ
‘ಯುವಸಿರಿ’ ಮತ್ತು ‘ಹಸಿರು ಸಿರಿ’ ಎಂಬ ಈ ಎರಡು ಪ್ರಮುಖ ಪರಿಕಲ್ಪನೆಗಳ ಮೂಲಕ ಕರ್ನಾಟಕವನ್ನು ಪರಿಸರ ಮತ್ತು ಮಾನವ ಸಂಪನ್ಮೂಲದಲ್ಲಿ ಅತ್ಯಂತ ಸಮೃದ್ಧಗೊಳಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯದ ಅಭಿವೃದ್ಧಿ ಮಾದರಿಯು ಇಡೀ ದೇಶಕ್ಕೇ ದಾರಿದೀಪವಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.



