ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ನೇರ ಪ್ರಸಾರದ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಈ ಬಂಧನಗಳು ನಡೆದಿವೆ.
ಫೇಸ್ಬುಕ್ ಲೈವ್ನಲ್ಲಿ ಬೆದರಿಕೆ ಕಮೆಂಟ್
ಗುವಾಹಟಿಯ ಖಾನಾಪಾರಾದಲ್ಲಿ ಮುಖ್ಯಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುತ್ತಿದ್ದಾಗ, ಫೇಸ್ಬುಕ್ ಲೈವ್ ಸ್ಟ್ರೀಮಿಂಗ್ನಲ್ಲಿ ಈ ಬೆದರಿಕೆ ಸಂದೇಶ ಬಂದಿತ್ತು. ಮುಖ್ಯಮಂತ್ರಿಯನ್ನು ಕೊಲ್ಲಲು ತನಗೆ 1 ಕೋಟಿ ರೂಪಾಯಿ ನೀಡಬೇಕು ಎಂದು ಆರೋಪಿ ಬರೆದಿದ್ದನು. ಹಣ ಕೊಡಲು ಸಿದ್ಧರಿರುವವರು ತನ್ನನ್ನು ಸಂಪರ್ಕಿಸಲಿ ಎಂದು ಮೊಬೈಲ್ ಸಂಖ್ಯೆಯನ್ನೂ ಹಾಕಿದ್ದನು.
ಭಾರತ ವಿರೋಧಿ ಘೋಷಣೆ
ಆರೋಪಿ ಹಾಕಿದ್ದ ಕಮೆಂಟ್ನಲ್ಲಿ ಕೇವಲ ಕೊಲೆ ಬೆದರಿಕೆ ಮಾತ್ರ ಇರಲಿಲ್ಲ. ಅದರೊಂದಿಗೆ “ಪಾಕಿಸ್ತಾನ್ ಜಿಂದಾಬಾದ್” ಸೇರಿದಂತೆ ಭಾರತ ವಿರೋಧಿ ಘೋಷಣೆಗಳನ್ನು ಕೂಡ ಹಾಕಲಾಗಿತ್ತು. ಇದು ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದಾರೆ.
ಮೊಬೈಲ್ ನಂಬರ್ ಆಧಾರದ ಮೇಲೆ ಆರೋಪಿ ಲಾಕ್
ಈ ಕಮೆಂಟ್ ಗಮನಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಭುರಗಾಂವ್ ಪೊಲೀಸರು, ಅದರಲ್ಲಿ ಇದ್ದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದರು. ತನಿಖೆ ವೇಳೆ ಅದು ಅಬ್ದುಲ್ ಮುತಾಲಿಬ್ ಹೆಸರಿನಲ್ಲೇ ನೋಂದಣಿಯಾಗಿರುವುದು ದೃಢಪಟ್ಟಿದೆ. ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ವೃತ್ತಿಯಲ್ಲಿ ದರ್ಜಿ ಆಗಿರುವ ಮುಖ್ಯ ಆರೋಪಿ ಮುತಾಲಿಬ್ನನ್ನು ಬಂಧಿಸಿದ್ದಾರೆ.
ಕುಟುಂಬಸ್ಥರ ವಿಚಾರಣೆ, ಸೈಬರ್ ತನಿಖೆ ಚುರುಕು
ಮುಖ್ಯ ಆರೋಪಿಯ ಬಂಧನದ ಬೆನ್ನಲ್ಲೇ ಪೊಲೀಸರು ತಡರಾತ್ರಿ ಮತ್ತೊಂದು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯ ತಂದೆ, ಸಹೋದರ ಸೇರಿದಂತೆ ಒಟ್ಟು ಮೂವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದ್ದು, ಈ ಖಾತೆಯನ್ನು ಮುತಾಲಿಬ್ ಅವರೇ ಬಳಸುತ್ತಿದ್ದರೇ ಅಥವಾ ಇದರ ಹಿಂದೆ ಬೇರೆ ಏನಾದರೂ ಪಿತೂರಿ ಇದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.



