August 18, 2026
Tuesday, August 18, 2026
spot_img

ಅನ್ನಂ‌ ಬ್ರಹ್ಮ ಮಾಲಿಕೆ | ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಸಿವು ಹಾಗೂ ಆಹಾರ ಇವೆರಡೇ ಜೀವಿಯ ಎಲ್ಲವನ್ನೂ ನಿರ್ಧರಿಸುತ್ತದೆ. ಹಾಗಾಗಿ ವೇದ ಪರಂಪರೆಯಲ್ಲಿ ‘ಅಗ್ನಿಸೋಮಾತ್ಮಕಂ ಜಗತ್’ ಎಂದಿದ್ದು, ಅಗ್ನಿ ಎಂದರೆ ಹಸಿವಾಗಿದ್ದು, ಸೋಮ ಎಂದರೆ ಆಹಾರವಾಗಿದೆ. ಆಹಾರವನ್ನು ತಿಳಿದುಕೊಳ್ಳಲು ಹಸಿವನ್ನು ಹಾಗೂ ಹಸಿವಿನ ಮೂಲವನ್ನು ಮೊದಲು ಅರಿತುಕೊಳ್ಳಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮಂಗಳವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಜಠರಾಗ್ನಿ’ಯ ಕುರಿತಾಗಿ ಅವರು ಪ್ರವಚನ ಅನುಗ್ರಹಿಸಿದರು.

ಆಧುನಿಕ ವಿಜ್ಞಾನದಲ್ಲಿ ದೇಹವೆಂದರೆ ಆಮ್ಲಜನಕ, ಇಂಗಾಲ, ಪರಮಾಣು ಎಂಬುದಾಗಿ ವಿಶ್ಲೇಷಿಸುತ್ತಾರೆ. ಇವುಗಳನ್ನು ಅನ್ವೇಷಿಸಲು ಆಧುನಿಕರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಅದನ್ನು ಅಲ್ಲಗಳೆಯುವಂತಿಲ್ಲ. ಆದರೆ ನಾವು ಎಂದರೆ ಏನು? ಎಂದಾಗ ಕೇವಲ ಆಮ್ಲಜನಕ, ಇಂಗಾಲ, ಪರಮಾಣುಗಳು ಎನ್ನಲಾಗದು. ಭಾರತೀಯ ದೃಷ್ಟಿಯಲ್ಲಿ ದೇಹವೆಂದರೆ ಪಂಚಭೂತಗಳ ಸಂಯೋಜನೆಯಾಗಿದ್ದು, ಗಟ್ಟಿಯಾದ ಭಾಗಗಳು ಪೃಥ್ವಿ, ದ್ರವಾಂಶ ನೀರು, ಉಷ್ಣಾಂಶ ಅಗ್ನಿ, ಗಾಳಿಯು ವಾಯು, ದೇಹದಲ್ಲಿರುವ ಸ್ಥಳಾವಕಾಶವೇ ಆಕಾಶವಾಗಿದೆ. ಪಂಚಭೂತಗಳು ದೇಹದೊಳಗೆ ಸಪ್ತ ಧಾತುಗಳಾಗಿ ಪರಿವರ್ತಿತವಾಗುವುದಕ್ಕೆ ಅಗ್ನಿಯು ಕಾರಣವಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ದೇಹದಲ್ಲಿ ಪ್ರಮುಖವಾಗಿ 18 ಅಗ್ನಿಗಳಿದ್ದು, ದೇಹದ ಎಲ್ಲಾ ಕಡೆಗಳಲ್ಲಿ ಅಗ್ನಿ ವ್ಯಾಪಿಸಿದೆ. ರಸ – ರಕ್ತ – ಮಾಂಸ – ಮೇದಸ್ಸು – ಅಸ್ತಿ – ಮಜ್ಜೆ – ಶುಕ್ರ ಎಂಬ ಸಪ್ತಧಾತುಗಳಲ್ಲಿಯೂ ಧಾತ್ತ್ವಗ್ನಿಗಳಿದ್ದು ಈ ಅಗ್ನಿಯಿಂದಲೇ ಮುಂದಿನ ಧಾತುಗಳು ಉಂಟಾಗುತ್ತಾ ಸಾಗುತ್ತದೆ. ಇವೆಲ್ಲವೂ ಅಗ್ನಿಯ ಕಾರ್ಯವಾಗಿದೆ. ಧಾತು ರೂಪಾಂತರದ ವಿಚಾರದಲ್ಲಿ ಪ್ರಾಚೀನ ಭಾರತೀಯರ ಅಭಿಪ್ರಾಯಕ್ಕೂ ಆಧುನಿಕ ವಿಜ್ಞಾನಕ್ಕೂ ಅಲ್ಪ ಅಭಿಪ್ರಾಯ ಬೇಧವಿದ್ದು, ಮುಂದೊಂದು ದಿನ ಆಧುನಿಕ ವಿಜ್ಞಾನವು ಪಾರಂಪರಿಕ ಅಭಿಪ್ರಾಯವನ್ನು ಒಪ್ಪುವ ದಿನ ಬರಬಹುದು ಎಂದು ಸ್ವಾಮೀಜಿ ವಿವರಿಸಿದರು.

ಎಲ್ಲಾ ಕಡೆಯಲ್ಲೂ ಸಮಾನತೆ ಎಂಬುದನ್ನು ಹುಡುಕುವುದು ಮೂರ್ಖತನವಾಗುತ್ತದೆ. ಸೃಷ್ಟಿಯೆಂಬುದು ವೈವಿಧ್ಯತೆಯಾಗಿದ್ದು. ಮುಕ್ತಿಯಲ್ಲಿ ಮಾತ್ರ ಏಕತೆಯನ್ನು ಕಾಣಬಹುದು. ಕೈಯಿಗಳು ಇರುವಷ್ಟು ಉದ್ದ ಮೂಗಿಲ್ಲ. ಹಾಗಾಗಿ ಎಲ್ಲೆಡೆ ಸಮಾನತೆಯನ್ನು ಹುಡುಕಲಾಗದು, ದೇಹದಲ್ಲೂ ಎಲ್ಲವೂ ಸಮಾನವಾಗಿರಲು ಸಾಧ್ಯವಿಲ್ಲ. ಆಯಾಯ ಧಾತುಗಳು ಎಷ್ಟಿರಬೇಕೋ ಅಷ್ಟಿರಬೇಕು. ಇದು ಸೃಷ್ಟಿಯ ಅದ್ಭುತ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಕೊಲ್ಲೂರು ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಶ್ರೀಧರ ಅಡಿಗ, ಶಿಕ್ಷಣ ತಜ್ಞ ಎಮ್. ಆರ್. ಹೆಗಡೆ ಉಡುಪಿ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.

ಹರ್ಷ ಮಾಂಕನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಜಿ.ವಿ. ಹೆಗಡೆ ಗೋಕರ್ಣ ದಂಪತಿ ದಿನಪ್ರಧಾನರಾಗಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !