ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ಬಾರಿ ಗಜಪಡೆಯಲ್ಲೂ ಮಹತ್ವದ ಬದಲಾವಣೆ ಕಂಡುಬಂದಿದೆ. ಅಕ್ಟೋಬರ್ 11ರಂದು ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದೆ.
60 ವರ್ಷ ತುಂಬಿದ ಅಭಿಮನ್ಯುಗೆ ವಿಶ್ರಾಂತಿ
ಕಳೆದ ಆರು ವರ್ಷಗಳಿಂದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಗಜಪಡೆ ಕ್ಯಾಪ್ಟನ್ ಅಭಿಮನ್ಯು, 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮೆರವಣಿಗೆಯಿಂದ ಹೊರಗುಳಿಯಲಿದ್ದಾನೆ. ಹೀಗಾಗಿ ಅಂಬಾರಿ ಹೊರುವ ಹೊಸ ಆನೆಯ ಆಯ್ಕೆಗೆ ಅರಣ್ಯ ಇಲಾಖೆ ಮುಂದಾಗಿದೆ.
ಇದನ್ನೂ ಓದಿ:
12 ಆನೆಗಳ ಅಂತಿಮ ಪಟ್ಟಿ
ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಈ ವರ್ಷದ ದಸರಾ ಗಜಪಡೆಯ ಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 12 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ, ಮಹೇಂದ್ರ, ಲಕ್ಷ್ಮೀ, ಏಕಲವ್ಯ, ರೂಪ, ಚೈತ್ರ ಹಾಗೂ ಶ್ರೀಕಂಠ ಗಜಪಡೆಯಲ್ಲಿದ್ದಾರೆ. ಭೀಮಾ ಮತ್ತು ಹರ್ಷ ಆನೆಗಳನ್ನು ಮೀಸಲಿಡಲಾಗಿದೆ.
ಆಗಸ್ಟ್ 26ರಂದು ಗಜಪಯಣ
ಆಗಸ್ಟ್ 26ರಂದು ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ಆನೆಗಳನ್ನು ಹಂತ ಹಂತವಾಗಿ ಮೈಸೂರಿಗೆ ಕರೆತಂದು ದಸರಾ ಮೆರವಣಿಗೆಗೆ ಸಜ್ಜುಗೊಳಿಸಲಾಗುತ್ತದೆ.



