ಹೊಸದಿಗಂತ ವರದಿ ಶ್ರೀರಂಗಪಟ್ಟಣ:
ತಾಲೂಕಿನ ಕೆ.ಆರ್. ಸಾಗರದ ಬೃಂದಾವನ ಸಮೀಪದ ಬಸ್ ನಿಲ್ದಾಣದ ಬಳಿ ಕಾವೇರಿ ನದಿಗೆ ಯುವತಿಯೊಬ್ಬಳು ತಾಯಿ ಎದುರೇ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೈಸೂರು ನಗರದ ರಾಮಕೃಷ್ಣ ನಗರದ ನಿವಾಸಿ ಕಾಳೇಗೌಡ ಅವರ ಪುತ್ರಿ, 27 ವರ್ಷದ ಕುಸುಮಾಂಜಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಕುಸುಮಾಂಜಲಿ ಮಾನಸಿಕ ಒತ್ತಡದಲ್ಲಿದ್ದರು ಎಂದು ಅವರ ತಾಯಿ ತಿಳಿಸಿದ್ದಾರೆ.
ತಾಯಿ ವೀಣಾ ಅವರನ್ನು ಬೃಂದಾವನ ವೀಕ್ಷಿಸಲು ಹೋಗೋಣ ಎಂದು ಒತ್ತಾಯಿಸಿದ ಕುಸುಮಾಂಜಲಿ, ಸ್ಕೂಟರ್ನಲ್ಲಿ ಕೆ.ಆರ್. ಸಾಗರಕ್ಕೆ ಬಂದಿದ್ದರು. ಈ ವೇಳೆ ಹರಿಯುವ ನೀರಿನ ಬಳಿ ನಿಂತು ಫೋಟೊ ತೆಗೆದುಕೊಳ್ಳುವುದಾಗಿ ಹೇಳಿ, ಏಕಾಏಕಿ ತಾಯಿ ಕಣ್ಣೆದುರೇ ನದಿಗೆ ಹಾರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ಮಗಳ ಆತ್ಮಹತ್ಯೆಯನ್ನು ಕಣ್ಣಾರೆ ಕಂಡ ತಾಯಿ, ಮಗಳನ್ನು ಬದುಕಿಸುವಂತೆ ಸ್ಥಳದಲ್ಲೇ ಗೋಳಾಡಿದ್ದು ಮನಕಲಕುವಂತಿತ್ತು. ಸಹಾಯಕ್ಕೆ ಬಂದವರು ನದಿಯಲ್ಲಿ ನೀರಿನ ರಭಸ ಹೆಚ್ಚಿದ್ದ ಕಾರಣ ನದಿಗಿಳಿಯಲು ಹಿಂದೇಟು ಹಾಕಿದರು.
ವಿಷಯ ತಿಳಿದು ಕೆ.ಆರ್. ಸಾಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನದಿಯಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



