ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಯಾವ ರೀತಿಯಾಗಿ ಸ್ಪಂದಿಸುತ್ತಾರೆ ಅನ್ನೋದು ಆಡಳಿತದಲ್ಲಿ ತುಂಬಾ ಮುಖ್ಯವಾಗಿರುತ್ತೆ. ಆದರೆ ಹಲವಾರು ಬಾರಿ ಸರ್ಕಾರಿ ಕಚೇರಿಗಳಲ್ಲಿ ಮೂಲಭೂತ ಸೌಲಭ್ಯಗಳ ನಿರ್ವಹಣೆಯಲ್ಲಿ ತೀರ ನಿರ್ಲಕ್ಷ ತೋರಿಬಿಡ್ತಾರೆ. ಇದೀಗ ನಾಗರ್ಕರ್ನೂಲ್ ಜಿಲ್ಲೆಯ ಪೆಂಟ್ಲವೆಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಅಂಥದೇ ಘಟನೆ ನಡೆದಿದೆ.
ಕೊಳಕು ಶೌಚಾಲಯ ಕಂಡು ಅಧಿಕಾರಿಗಳಿಗೆ ತರಾಟೆ
ತೆಲಂಗಾಣ ಸಚಿವ ಜುಪಲ್ಲಿ ಕೃಷ್ಣರಾವ್ ತಹಶೀಲ್ದಾರ್ ಕಚೇರಿ ಪರಿಶೀಲನೆಗೆ ಬಂದಿದ್ದ ವೇಳೆ ಶೌಚಾಲಯದ ಪರಿಸ್ಥಿತಿ ಕಂಡು ಸಚಿವರು ಅಸಮಾಧಾನಗೊಂಡಿದ್ದಾರೆ. ಸಾರ್ವಜನಿಕರು ಭೇಟಿ ನೀಡುವ ಸರ್ಕಾರಿ ಕಚೇರಿಯಲ್ಲೇ ಕನಿಷ್ಠ ಸ್ವಚ್ಛತೆ ಕಾಪಾಡದಿರುವುದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

ಸಚಿವರು ಏನ್ ಮಾಡಿದ್ರು ನೋಡಿ
ಅಸ್ವಚ್ಛತೆ ಕಂಡು ಕೇವಲ ಅಧಿಕಾರಿಗಳಿಗೆ ಸೂಚನೆ ನೀಡಿ ಸುಮ್ಮನಾಗದ ಸಚಿವ ಜುಪಲ್ಲಿ ಕೃಷ್ಣರಾವ್, ಸ್ವತಃ ನೀರು ಸುರಿದು ಶೌಚಾಲಯವನ್ನು ಸ್ವಚ್ಛಗೊಳಿಸಿದರು. ಸಚಿವರ ಈ ನಡೆ ಸರ್ಕಾರಿ ಕಚೇರಿಗಳಲ್ಲಿ ನೈರ್ಮಲ್ಯ ವ್ಯವಸ್ಥೆ ಹೇಗಿರಬೇಕು ಎಂಬುದರ ಬಗ್ಗೆ ಗಮನ ಸೆಳೆಯಿತು.
ಬಾಕಿ ಅರ್ಜಿಗಳ ಕುರಿತು ಪ್ರಶ್ನೆ
ತಹಶೀಲ್ದಾರ್ ಕಚೇರಿಯ ಕಾರ್ಯವೈಖರಿ ಪರಿಶೀಲನೆಯ ಭಾಗವಾಗಿ ಸಚಿವರು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹಾಗೂ ಬಾಕಿ ಉಳಿದಿರುವ ಕಡತಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಮಂಡಲ ಕಂದಾಯ ಕಚೇರಿ ಮತ್ತು ಕಂದಾಯ ವಿಭಾಗೀಯ ಅಧಿಕಾರಿ (RDO) ಕಚೇರಿ ನಡುವೆ ಬಾಕಿ ಇರುವ ಕಡತಗಳ ಬಗ್ಗೆಯೂ ಮಾಹಿತಿ ಪಡೆದರು.
ಕಂದಾಯ ಸಂಬಂಧಿತ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಸಾರ್ವಜನಿಕರ ಅರ್ಜಿಗಳನ್ನು ಅನಗತ್ಯವಾಗಿ ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಪರಿಹರಿಸುವಂತೆ ಸೂಚಿಸಿದರು. ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಜೊತೆಗೆ ವೇಗದ ಸಾರ್ವಜನಿಕ ಸೇವೆಗೂ ಆದ್ಯತೆ ನೀಡಬೇಕು ಎಂದು ಜುಪಲ್ಲಿ ಕೃಷ್ಣರಾವ್ ಅಧಿಕಾರಿಗಳಿಗೆ ತಿಳಿಸಿದರು.



