ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತಿಹಾಸ ಕಂಡು ಕೇಳರಿಯದಂತಹ ಭೀಕರ ಪ್ರವಾಹಕ್ಕೆ ನೇಪಾಳ ನಲುಗಿಹೋಗಿದೆ. ಒಂದು ದಿನದ ಪ್ರವಾಹದಿಂದಾಗಿ ನೂರಾರು ಸಾವುಗಳು ಸಂಭವಿಸಿದ್ದು, ಸುಂದರ ನೇಪಾಳ ಇದೀಗ ಅಕ್ಷರಶಃ ಮಸಣದಂತಾಗಿದೆ. ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ 788ಕ್ಕೆ ಏರಿಕೆಯಾಗಿದೆ. ಇನ್ನೂ2,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರನ್ನು ಹುಡುಕಲು ರಕ್ಷಣಾ ತಂಡಗಳು ತೀವ್ರ ಶೋಧ ನಡೆಸುತ್ತಿವೆ. ಆರು ದಿನಗಳ ಹಿಂದೆ ನೇಪಾಳ-ಟಿಬೆಟ್ ಗಡಿ ಸಮೀಪ ಹಿಮನದಿ ಕುಸಿತದ ಬಳಿಕ ಹಿಮ ಬಂಡೆಗಳ ಭಾರೀ ಕುಸಿತದಿಂದ ಹಠಾತ್ ಪ್ರವಾಹ ಉಂಟಾಗಿತ್ತು.
ಸುರಂಗದೊಳಗೆ ಸಿಲುಕಿದ್ದಾರೆ ನೂರಾರು ಕಾರ್ಮಿಕರು
ಪ್ರವಾಹದ ಅವಶೇಷಗಳಿಂದ ತುಂಬಿರುವ ಸುರಂಗದೊಳಗೆ ಜಲವಿದ್ಯುತ್ ಯೋಜನೆ ಕಾರ್ಮಿಕರು ಸಿಲುಕಿದ್ದಾರೆ. ನೂರಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿದ್ದಾರೆ ಎನ್ನಲಾಗಿದ್ದುರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನುವಾಕೋಟ್ನಲ್ಲಿರುವ ಸುರಂಗದೊಳಗೆ ಸಿಲುಕಿರುವ ಜನರನ್ನು ರಕ್ಷಿಸಲು ಕೊರೆಯುವ ಕಾರ್ಯ ಆರಂಭವಾಗಿದೆ. ಸದ್ಯ ಅದರೊಳಗೆ ಗಾಳಿ ಪಂಪ್ ಮಾಡಿ ಕ್ಯಾಮರಾ ಕಳುಹಿಸಲಾಗಿದೆ. ಆದರೆ ಅದರೊಳಗಿರುವ ಸಿಬ್ಬಂದಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ದ್ವಾರವನ್ನು ಮತ್ತಷ್ಟು ವಿಸ್ತರಿಸಿ ಆಮ್ಲಜನಕ ಸಿಲಿಂಡರ್ ಜತೆ ಸುರಂಗದೊಳಕ್ಕೆ ಪ್ರವೇಶಿಲು ಸಿದ್ಧತೆ ಮಾಡಲಾಗುತ್ತಿದೆ.
ಭಾರತದ ನದಿಗಳ ಮೇಲೂ ನಿಗಾ
ನೇಪಾಳ ಭೀಕರ ಪ್ರವಾಹದ ಹಿನ್ನೆಲೆ ಭಾರತವೂ ಹಿಮನದಿಗಳ ಮೇಲೆ ನಿಗಾ ಇರಿಸಿದೆ. ಪ್ರವಾಹಕ್ಕೆ ಸಂಬಂಧಿಸಿದ ಅಪಾಯಗಳನ್ನು ಮುಂಚೆಯೇ ಗುರುತಿಸಲು ಹಿಮನದಿಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ.



