Sunday, September 14, 2025

Vastu | ಮನೆಯ ಹಿತ್ತಲಲ್ಲಿ ವೀಳ್ಯದೆಲೆ ಬಳ್ಳಿ ಇದ್ಯಾ? ಹಾಗಿದ್ರೆ ಈ ವಿಷ್ಯ ನಿಮಗೆ ಗೊತ್ತಿರಲೇಬೇಕು!

ಭಾರತೀಯ ಆಹಾರ ಪದ್ಧತಿಯಲ್ಲಿ ಊಟದ ಬಳಿಕ ವೀಳ್ಯದೆಲೆ, ಅಡಿಕೆ ತಿನ್ನುವುದು ಶತಮಾನಗಳಿಂದಲೂ ನಡೆದುಬಂದಿರುವ ಒಂದು ಸಂಪ್ರದಾಯ. ಕೇವಲ ಸಂಪ್ರದಾಯವಷ್ಟೇ ಅಲ್ಲ, ವೀಳ್ಯದೆಲೆಯು ಔಷಧೀಯ ಗುಣಗಳಿಂದ ಕೂಡಿದೆ. ಸಣ್ಣ ಗಾಯಗಳಿಗೆ ಬ್ಯಾಂಡೇಜ್ ಬದಲಿಗೆ ಬಳಸುವಷ್ಟು ಪರಿಣಾಮಕಾರಿ ಎಲೆ ಇದು. ಅಷ್ಟೇ ಅಲ್ಲ, ವೀಳ್ಯದೆಲೆ ಹಿಂದು ಸಂಪ್ರದಾಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದು, ಪೂಜೆ, ವ್ರತ ಹಾಗೂ ಸಮಾರಂಭಗಳಲ್ಲಿ ತಾಂಬೂಲವಾಗಿ ನೀಡದೇ ಯಾವುದೇ ಕಾರ್ಯಕ್ರಮ ಪೂರ್ಣವಾಗುವುದಿಲ್ಲ.

ವೀಳ್ಯದೆಲೆಯನ್ನು ನಿಯಮಿತವಾಗಿ ಸೇವಿಸುವುದರಿಂದ ದೀರ್ಘಕಾಲದ ಕೆಲವು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಅನೇಕರು ಮನೆಗಳಲ್ಲಿ ವೀಳ್ಯದೆಲೆ ಬೆಳೆಸಲು ಶುರುಮಾಡಿದ್ದಾರೆ. ಆದರೆ ಈ ಗಿಡವನ್ನು ಬೆಳೆಸುವಾಗ ಪಾಲಿಸಬೇಕಾದ ಕೆಲ ವಾಸ್ತು ನಂಬಿಕೆಗಳೂ ಇವೆ.

ವಾಸ್ತು ಪ್ರಕಾರ ಪಾಲಿಸಬೇಕಾದ ನಿಯಮಗಳು
ವೀಳ್ಯದೆಲೆಯನ್ನು ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಲ್ಲಿ ಯಾವುದೇ ಕಾರಣಕ್ಕೂ ಕತ್ತರಿಸಬಾರದು. ಉಗುರಿನಿಂದ ಕೀಳುವುದು ಕೂಡಾ ತಪ್ಪು ಎಂದು ನಂಬಲಾಗುತ್ತದೆ. ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಅಥವಾ ಕೂದಲು ಕತ್ತರಿಸಿದ ನಂತರವೂ ಈ ಗಿಡವನ್ನು ಮುಟ್ಟಬಾರದು.

ವಿಶೇಷ ಸಂದರ್ಭಗಳಲ್ಲಿ ಎಚ್ಚರಿಕೆ
ಮನೆಯಲ್ಲೇ ಮಗು ಜನಿಸಿದಾಗ ಅಥವಾ ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದಾಗ ವೀಳ್ಯದೆಲೆಯನ್ನು ಮುಟ್ಟುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಆ ಸಮಯದಲ್ಲಿ ಮುಟ್ಟಿದರೆ ಗಿಡ ಸರಿಯಾಗಿ ಬೆಳೆಯುವುದಿಲ್ಲ ಎಂಬ ನಂಬಿಕೆ ಇದೆ.

ವೀಳ್ಯದೆಲೆಯು ಆರೋಗ್ಯ ಮತ್ತು ಸಂಪ್ರದಾಯ ಎರಡರಲ್ಲಿಯೂ ಪ್ರಮುಖ ಪಾತ್ರವಹಿಸಿದೆ. ಆದರೆ ಅದನ್ನು ಬೆಳೆಸುವ ಹಾಗೂ ಬಳಸುವ ವಿಧಾನಗಳಲ್ಲಿ ಕೆಲವು ನಿಯಮಗಳನ್ನು ಪೀಳಿಗೆಯಿಂದ ಪೀಳಿಗೆ ಅನುಸರಿಸಲಾಗುತ್ತಿದೆ. ವೈಜ್ಞಾನಿಕ ಕಾರಣಗಳಿಗಿಂತಲೂ ನಂಬಿಕೆಗಳೇ ಹೆಚ್ಚಾಗಿದ್ದರೂ, ವೀಳ್ಯದೆಲೆಯ ಮಹತ್ವವನ್ನು ಒಪ್ಪದೇ ಇರಲು ಸಾಧ್ಯವಿಲ್ಲ.

ಇದನ್ನೂ ಓದಿ