September 11, 2026
Friday, September 11, 2026
spot_img

3.3 ಕೋಟಿ ರೂ ನಗದು, 15 ಲಕ್ಷ ವಿದೇಶಿ ಕರೆನ್ಸಿ: ಸತೀಶ್ ಜಾರಕಿಹೊಳಿ ಪ್ರಕರಣದಲ್ಲಿ ED ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ED ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದೆ.

ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೊಲ್ಕತ್ತಾ ಸೇರಿದಂತೆ 21 ಸ್ಥಳಗಳಲ್ಲಿ ನಡೆದ ಶೋಧದ ವೇಳೆ 3.3 ಕೋಟಿ ಲೆಕ್ಕಕ್ಕೆ ಸಿಗದ ನಗದು ಹಾಗೂ 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿರುವುದಾಗಿ ಇಡಿ ತಿಳಿಸಿದೆ.

ED ಹೇಳಿದ್ದೇನು?

ವಿದೇಶಿ ಹೂಡಿಕೆ, ಗಡಿಯಾಚೆಗಿನ ಉದ್ಯಮ ಸಂಪರ್ಕ ಹಾಗೂ FEMA ಉಲ್ಲಂಘನೆಗಳ ಆರೋಪಗಳ ಕುರಿತು ತನಿಖೆ ನಡೆಸಲು ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಲೋಕೋಪಯೋಗಿ ಇಲಾಖೆಯ ಗುತ್ತಿಗೆ ಪಡೆಯಲು ‘ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್’ (BVEPL) ಸಂಸ್ಥೆಯಿಂದ ಭಾರಿ ಮೊತ್ತದ ಲಂಚ ನೀಡಲಾಗಿದೆ ಎಂಬ ಆರೋಪವನ್ನೂ ಇಡಿ ಮುಂದಿಟ್ಟಿದೆ.

ಕಾಂಗೋದ ‘ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್’ ಹಾಗೂ ಜಾಂಬಿಯಾದ ‘ನವ ಔರಂ ಮೈನಿಂಗ್ ಲಿಮಿಟೆಡ್’ ಸೇರಿದಂತೆ ಹಲವು ಕಂಪನಿಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ‘ಮ್ಯಾಗ್ನಿಟ್ಯೂಡ್ ಸ್ಟಾರ್ SARL’ ಸಂಸ್ಥೆಯಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಸುಮಾರು ಶೇ.40ರಷ್ಟು ಪಾಲುದಾರಿಕೆ ಇದೆ ಎಂದು ಇಡಿ ಉಲ್ಲೇಖಿಸಿದೆ.

ವಿದೇಶಿ ಕಂಪನಿಯೊಂದರಲ್ಲಿ ಭಾರೀ ನಗದು ಹೂಡಿಕೆ ಮಾಡಿರುವ ಸಾಕ್ಷ್ಯಗಳು ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿಸಿದೆ.

ಇವರ ನಿವಾಸಗಳಲ್ಲೂ ಶೋಧ

ಸತೀಶ್ ಜಾರಕಿಹೊಳಿ, ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಸೇರಿದಂತೆ ಕುಟುಂಬಸ್ಥರ ನಿವಾಸಗಳಲ್ಲೂ ಶೋಧ ನಡೆದಿದೆ. ಸಚಿವರ ಆಪ್ತರಾದ ಮಾಲಗೌಡ ಪಾಟೀಲ್, ರಾಜು ದಾರಗ ಶೆಟ್ಟಿ, ವಿಠಲ್ ಪರಸನ್ನನವರ ಹಾಗೂ ಶೋನಾವರ ಅವರ ಮನೆಗಳನ್ನೂ ಪರಿಶೀಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !