ಹೊಸದಿಗಂತ ವರದಿ ಹಾಸನ :
ಬೆಂಗಳೂರು ಮೂಲದ 23 ವರ್ಷದ ವರ್ಷ ಎಂಬ ಯುವತಿ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಕೂಡಿಗೆ ಸಮೀಪದ ಶ್ರೀದೇವಿ ಲಾಡ್ಜ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಸೆ.11 ರಂದು ಯುವತಿ ಇಬ್ಬರು ಯುವಕರೊಂದಿಗೆ ಲಾಡ್ಜ್ಗೆ ಬಂದಿದ್ದರು ಎನ್ನಲಾಗಿದ್ದು, ಬಳಿಕ ಅಲ್ಲಿಯೇ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾವಿಗೆ ನಿಖರ ಕಾರಣ ಇನ್ನಷ್ಟೇ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಘಟನೆ ತಿಳಿದು ಡಿವೈಎಸ್ಪಿ ಮಾಲತೀಶ್ ಹಾಗೂ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾಡ್ಜ್ನಲ್ಲಿನ ಮಾಹಿತಿ ಹಾಗೂ ಘಟನಾಕ್ರಮಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಯುವತಿಯೊಂದಿಗೆ ಬಂದಿದ್ದರು ಎನ್ನಲಾದ ಇಬ್ಬರು ಯುವಕರು ಯಾರು, ಅವರು ಸದ್ಯ ಎಲ್ಲಿದ್ದಾರೆ ಹಾಗೂ ಘಟನೆಯ ಸಂದರ್ಭದಲ್ಲಿ ಅವರ ಪಾತ್ರವೇನು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಯುವತಿಯ ಮೃತದೇಹವನ್ನು ಸಕಲೇಶಪುರದ ಕ್ರಾಫರ್ಡ್ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.



