ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ತೆರವುಗೊಳಿಸಿರುವ ಪಾದಚಾರಿ ಮಾರ್ಗಗಳು ಮತ್ತೆ ಒತ್ತುವರಿಯಾಗದಂತೆ ನೋಡಿಕೊಳ್ಳೋಕೆ ಕಠಿಣ ನಿಗಾ ವಹಿಸಲು ಗ್ರೇಟರ್ GBA ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈಗಾಗಲೇ ಒತ್ತುವರಿ ತೆರವುಗೊಳಿಸಿರುವ ಜಾಗದಲ್ಲೇ ಮತ್ತೆ ವ್ಯಾಪಾರ ಆರಂಭಿಸಿದ್ರೆ ಬೀದಿಬದಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಮರುಒತ್ತುವರಿ ಕಂಡುಬಂದ್ರೆ ವ್ಯಾಪಾರಕ್ಕೆ ಬಳಸೋ ವಸ್ತುಗಳನ್ನು ಸೀಜ್ ಮಾಡಿ. ಜೊತೆಗೆ ದಂಡ ವಿಧಿಸಿ, ಅಗತ್ಯ ಬಿದ್ರೆ ಎಫ್ಐಆರ್ ಕೂಡ ಹಾಕಿ ಎಂದು ಹೇಳಿದ್ದಾರೆ.
ಮತ್ತೆ ಬೀದಿಬದಿ ವ್ಯಾಪಾರ ಆರಂಭವಾಗುತ್ತಿರೋದು ಆತಂಕಕಾರಿ
ನಗರದ ಐದೂ ಪಾಲಿಕೆ ವ್ಯಾಪ್ತಿಗಳಲ್ಲಿ ಒಟ್ಟು 1,373.32 ಕಿ.ಮೀ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿರುವ ಅಧಿಕಾರಿಗಳ ಕಾರ್ಯವನ್ನು ಸಚಿವರು ಶ್ಲಾಘಿಸಿದ್ದಾರೆ. ಆದರೆ ಕೆಲವು ಪ್ರದೇಶಗಳಲ್ಲಿ ಒತ್ತುವರಿ ತೆರವುಗೊಂಡ ಬಳಿಕವೂ ಮತ್ತೆ ಬೀದಿಬದಿ ವ್ಯಾಪಾರ ಆರಂಭವಾಗುತ್ತಿರುವ ಮಾಹಿತಿ ಆತಂಕಕಾರಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಜಂಟಿ ಟಾಸ್ಕ್ಫೋರ್ಸ್ ರಚಿಸಿ
ಮರುಒತ್ತುವರಿ ತಡೆಯಲು ಪ್ರತಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳ ಸಮನ್ವಯದೊಂದಿಗೆ ಜಂಟಿ ಟಾಸ್ಕ್ಫೋರ್ಸ್ ರಚಿಸುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೆ ಮರುಒತ್ತುವರಿ ಪ್ರಕರಣಗಳನ್ನು ದಾಖಲಿಸಲು ಫೋಟೋ ಮತ್ತು ಜಿಯೋ-ಟ್ಯಾಗ್ ಮಾಹಿತಿಯೊಂದಿಗೆ ವರದಿ ಮಾಡುವ ವ್ಯವಸ್ಥೆ ರೂಪಿಸುವಂತೆ ಸೂಚಿಸಲಾಗಿದೆ. ಮಾರ್ಷಲ್ಗಳು ಹಾಗೂ ಬೀಟ್ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನಿಯಮಿತವಾಗಿ ಸ್ಥಳ ಪರಿಶೀಲನೆ ನಡೆಸಬೇಕು.
ಪಾದಚಾರಿಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಮೀಸಲಾದ ಜಾಗ ಮತ್ತೆ ಒತ್ತುವರಿಯಾಗದಂತೆ ನಿರಂತರ ಮೇಲ್ವಿಚಾರಣೆ ಅಗತ್ಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.



