September 20, 2026
Sunday, September 20, 2026
spot_img

30 ಲಕ್ಷ ರೂ. ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಎಟಿಎಸ್ ಎನ್‌ಕೌಂಟರ್‌ಗೆ ಬ*ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

30 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ ಜಾರ್ಖಂಡ್ ಮೂಲದ ನಕ್ಸಲ್ ಕಮಾಂಡರ್ ಬ್ರಿಜೇಶ್ ಗಂಜು ಅಲಿಯಾಸ್ ಗೋಪಾಲ್ ಸಿಂಗ್ ಭೋಕ್ತಾ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.

ಭಾನುವಾರ ರಾಮನಗರದ ಲಂಕಾ ಮೈದಾನ ಪ್ರದೇಶದಲ್ಲಿ ಉತ್ತರ ಪ್ರದೇಶದ ಎಟಿಎಸ್ ಮತ್ತು ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

TPC ಸಂಘಟನೆಯ ಕಮಾಂಡರ್

ಜಾರ್ಖಂಡ್‌ನ ಚತ್ರಾ ಜಿಲ್ಲೆಯ ನಿವಾಸಿಯಾಗಿದ್ದ ಬ್ರಿಜೇಶ್, ನಿಷೇಧಿತ ತೃತೀಯ ಪ್ರಸ್ತುತಿ ಸಮಿತಿ (TPC) ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದ. ಈ ಸಂಘಟನೆ ಜಾರ್ಖಂಡ್‌ನಲ್ಲಿ CPI (ಮಾವೋವಾದಿ)ಯಿಂದ ಬೇರ್ಪಟ್ಟ ಗುಂಪಾಗಿ ರೂಪುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವು ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆತ ಭದ್ರತಾ ಸಂಸ್ಥೆಗಳಿಗೆ ಬೇಕಾಗಿದ್ದ.

ಇದನ್ನೂ ಓದಿ:

ಪೊಲೀಸರತ್ತ ಗುಂಡು ಹಾರಿಸಿದ ಬ್ರಿಜೇಶ್

ಪೊಲೀಸರ ಪ್ರಕಾರ, ಬ್ರಿಜೇಶ್ ತನ್ನ ಸಹಚರನೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಮುಘಲ್ಸರಾಯಿ ಕಡೆಗೆ ತೆರಳುತ್ತಿದ್ದಾಗ ರಾಮನಗರದ ಬಳಿ ಎಟಿಎಸ್ ತಂಡ ತಡೆದು ಪರಿಶೀಲಿಸಲು ಮುಂದಾಗಿದೆ. ಈ ವೇಳೆ ಆತ ಪೊಲೀಸರತ್ತ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಪ್ರತಿದಾಳಿಯಲ್ಲಿ ಗಾಯಗೊಂಡ ಬ್ರಿಜೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಬ್ರಿಜೇಶ್ ಬಂಧನಕ್ಕೆ ಮಾಹಿತಿ ನೀಡುವವರಿಗೆ ಜಾರ್ಖಂಡ್ ಸರ್ಕಾರ 25 ಲಕ್ಷ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 5 ಲಕ್ಷ ಬಹುಮಾನ ಘೋಷಿಸಿತ್ತು. ಹೀಗಾಗಿ ಒಟ್ಟು 30 ಲಕ್ಷ ಬಹುಮಾನ ನಿಗದಿಯಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !