ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲದ ಬಡ್ಡಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ದುಷ್ಕರ್ಮಿಗಳು 17 ವರ್ಷದ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ಎಸೆಗಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ವರದಿಯಾಗಿದೆ.
ಖಾಸಗಿ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ಹಾಡಹಗಲೇ 17 ವರ್ಷದ ಬಾಲಕಿ ಮೇಲೆ ದುರುಳನಿಂದ ಅತ್ಯಾಚಾರ ಮಾಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ವರದಿಯಲ್ಲಿರುವಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ರವಿಕುಮಾರ್ (39 ವರ್ಷ) ಎಂಬಾತನನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ ಸಂತ್ರಸ್ತ ಯುವತಿಯ ತಂದೆ ಆರೋಪಿ ರವಿ ಕುಮಾರ್ ಬಳಿ 70 ಸಾವಿರ ರೂ. ಹಣ ಪಡೆದಿದ್ದರು. ಆದರೆ ಸಮಯಕ್ಕೆ ಅದನ್ನು ಹಿಂದುರುಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಸಾಕಷ್ಟು ಬಾರಿ ರವಿಕುಮಾರ್ ಸಂತ್ರಸ್ಥೆಯ ತಂದೆಯೊಂದಿಗೆ ಬಡ್ಡಿ ಮತ್ತು ಅಸಲು ಪಾವತಿಗಾಗಿ ಜಗಳ ಮಾಡಿದ್ದ. ಬಳಿಕ ಅವರು 30 ಸಾವಿರ ರೂ. ಸಾಲ ತೀರಿಸಿದ್ದರು. ಇನ್ನುಳಿದ 40 ಸಾವಿರ ರೂ. ಜೊತೆಗೆ ಬಡ್ಡಿ ಹಣ ನೀಡದಿದ್ದಕ್ಕೆ ರವಿಕುಮಾರ್ ಪೀಡಿಸುತ್ತಿದ್ದ.