ಹೊಸದಿಗಂತ ವರದಿ ಮಂಗಳೂರು:
ಇಫ್ತಾರ್ ಕೂಟ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಬಾಲಕ ಸೈಕಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಎಂಬಲ್ಲಿ ನಡೆದಿದೆ.
ಇಲ್ಲಿನ ದೇವಸ್ಯ ನಿವಾಸಿ ಅಬೂಬಕ್ಕರ್ ಎಂಬವರ ಮಗಳು ಅಸ್ಮ ಎಂಬುವವರ ಪುತ್ರ ಸುಮಾರು 12 ವರ್ಷದ ಆಸೀಪ್ ಸಾವನ್ನಪ್ಪಿದವರು.
ಮದರಸವೊಂದರಲ್ಲಿ ಆಯೋಜಿಸಲಾದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಸೈಕಲ್ನಲ್ಲಿ ಹಿಂತಿರುಗುವ ವೇಳೆ ಆತ ರಸ್ತೆಯ ತಿರುವಿನಲ್ಲಿ ಅಕಸ್ಮಾತ್ ನಿಯಂತ್ರಣ ತಪ್ಪಿ ಬಿದ್ದಿದ್ದು ಪರಿಣಾಮ ಬಾಲಕನ ದೇಹದ ಒಳಭಾಗಕ್ಕೆ ತೀವ್ರವಾದ ಪೆಟ್ಟು ತಗುಲಿತ್ತು. ಆಸೀಪ್ನ್ನು ತಕ್ಷಣ ಚಿಕಿತ್ಸೆಗಾಗಿ ತುಂಬೆಯ ಆಸ್ಪತ್ರೆಗೆ ಸಾಗಿಸಿದರೂ, ಆತನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳಿತ್ತನೂಜಿಯ ವಿದ್ಯಾರ್ಥಿಯಾಗಿದ್ದ ಆಸೀಪ್ ಶಾಲೆಯ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ಬಾಲಕನಾಗಿದ್ದ. ತಾಯಿಗೆ ಏಕೈಕ ಮಗನಾಗಿದ್ದ ಆಸೀಪ್ನ ಅಕಾಲಿಕ ನಿಧನವು ಕುಟುಂಬದವರನ್ನು ತೀವ್ರ ಆಘಾತಕ್ಕೆ ಗುರಿಮಾಡಿದ್ದು, ಬಂಧುಬಳಗ ಹಾಗೂ ಗ್ರಾಮಸ್ಥರಲ್ಲೂ ದುಃಖದ ವಾತಾವರಣ ನಿರ್ಮಾಣವಾಗಿದೆ.



