Wednesday, December 31, 2025

ಸಂಕಷ್ಟದ ನಡುವೆ ಸೌಹಾರ್ದದ ಸೇತುವೆ: ಬಾಂಗ್ಲಾ ಮಣ್ಣಿನಲ್ಲಿ ಭಾರತದ ‘ಎಚ್ಚರಿಕೆಯ’ ಹೆಜ್ಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ರಾಜಕೀಯ ಇತಿಹಾಸದ ಒಂದು ಧ್ರುವತಾರೆ ಅಸ್ತಮಿಸಿದೆ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಲ್ಗೊಳ್ಳುತ್ತಿರುವುದು ಕೇವಲ ಒಂದು ಸಾಂಪ್ರದಾಯಿಕ ಭೇಟಿಯಲ್ಲ. ಇದು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದ ಹೊಸ ಅಧ್ಯಾಯದ ಮುನ್ನುಡಿಯಂತೆ ಕಾಣುತ್ತಿದೆ.

ಖಲೀದಾ ಜಿಯಾ ಅವರ ಅಧಿಕಾರಾವಧಿಯಲ್ಲಿ ಬಾಂಗ್ಲಾದೇಶ ಮತ್ತು ಚೀನಾದ ನಡುವಿನ ಅತಿಯಾದ ನಿಕಟತೆ, ವಿಶೇಷವಾಗಿ ಮಿಲಿಟರಿ ರಂಗದಲ್ಲಿನ ಸಹಕಾರ ಭಾರತಕ್ಕೆ ನುಂಗಲಾರದ ತುತ್ತಾಗಿತ್ತು. ಭಾರತದ ಭದ್ರತಾ ಕಾಳಜಿಗಳನ್ನು ನಿರ್ಲಕ್ಷಿಸಿ ಚೀನಾದತ್ತ ವಾಲುವುದರಲ್ಲಿ ಜಿಯಾ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇಂದು ಕಾಲಚಕ್ರ ಉರುಳಿದೆ. ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಭಾರತ ಮತ್ತು ಬಾಂಗ್ಲಾ ನಡುವೆ ಉಂಟಾಗಿರುವ ‘ಶೀತಲ ಸಮರ’ದಂತಹ ವಾತಾವರಣವನ್ನು ತಿಳಿಗೊಳಿಸಲು ದೆಹಲಿಗೆ ಈಗ ಹೊಸ ಹಾದಿಯ ಅನಿವಾರ್ಯತೆ ಇದೆ.

ಕಳೆದ ವರ್ಷದ ದಂಗೆಯ ನಂತರ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿರುವುದು ಈಗಿನ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಅಸಮಾಧಾನ ತಂದಿದೆ. ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾ ಮಾಡುತ್ತಿರುವ ಒತ್ತಾಯ ಭಾರತವನ್ನು ಧರ್ಮಸಂಕಟಕ್ಕೆ ದೂಡಿದೆ. ಇಂತಹ ಸಮಯದಲ್ಲಿ, ವಿರೋಧ ಪಕ್ಷವಾಗಿದ್ದ BNP ಗೆ ಅತ್ಯಂತ ಭಾವನಾತ್ಮಕ ಕ್ಷಣದಲ್ಲಿ ಸಾಂತ್ವನ ಹೇಳಲು ಜೈಶಂಕರ್ ತೆರಳುತ್ತಿರುವುದು ‘ಶತ್ರುವಿನ ಶತ್ರು ಮಿತ್ರ’ ಎಂಬ ತತ್ವದ ಮೇಲೆ ನಿಂತಿರುವ ರಾಜತಾಂತ್ರಿಕ ನಡೆಯೇ? ಎಂಬ ಪ್ರಶ್ನೆ ಮೂಡಿದೆ.

17 ವರ್ಷಗಳ ಕಾಲ ಗಡಿಪಾರು ಶಿಕ್ಷೆ ಅನುಭವಿಸಿ ವಾಪಸ್ ಬಂದಿರುವ ಜಿಯಾ ಪುತ್ರ ತಾರಿಕ್ ರೆಹಮಾನ್, ಈಗ ಬಾಂಗ್ಲಾದ ಮುಂದಿನ ನಾಯಕನಾಗಿ ಬಿಂಬಿತವಾಗುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ BNP ಅಧಿಕಾರ ಹಿಡಿಯುವ ಸಾಧ್ಯತೆಗಳಿರುವುದರಿಂದ, ಅವರೊಂದಿಗೆ ಈಗಿನಿಂದಲೇ ಸಂಬಂಧ ಸುಧಾರಿಸಿಕೊಳ್ಳುವುದು ಭಾರತದ ಪಾಲಿಗೆ ಅತ್ಯಗತ್ಯ. ಚೀನಾದ ಪ್ರಭಾವವನ್ನು ತಗ್ಗಿಸಲು ಮತ್ತು ಈಶಾನ್ಯ ಭಾರತದ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತಕ್ಕೆ ಬಾಂಗ್ಲಾದ ಸಹಕಾರ ಬೇಕೇ ಬೇಕು.

error: Content is protected !!