February 26, 2026
Thursday, February 26, 2026
spot_img

ತೋಟದಲ್ಲಿ ಅಳವಡಿಸಿದ್ದ ಬೋನಿಗೆ ಬಿದ್ದ ಕೋಳಿ ಕಳ್ಳ ಚಿರತೆ

ಹೊಸದಿಗಂತ ವರದಿ ಚನ್ನರಾಯಪಟ್ಟಣ:

ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಗೂರು ಗ್ರಾಮದ ತೋಟವೊಂದರಲ್ಲಿ ಅಳವಡಿಸಿದ್ದ ಬೋನಿಗೆ ಮೂರು ವರ್ಷದ ಗಂಡು ಚಿರತೆ ಬಿದ್ದಿದೆ.

ಗ್ರಾಮದ ಆನಂದ್ ಅವರ ತೋಟದ ಮನೆಯಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದು. ಪದೇ ಪದೇ ಬಂದು ಕೋಳಿಗಳ ಮೇಲೆ ದಾಳಿ ಮಾಡುತ್ತಿತ್ತು. ಚಿರತೆ ಹಾವಳಿಯಿಂದ ಬೇಸತ್ತ ಆನಂದ್, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಸ್ಥಳ ಗುರುತಿಸಿ ಬೋನು ಅಳವಡಿಸಿದ್ದರು.

ಬುಧವಾರ ಮಧ್ಯರಾತ್ರಿ ಸುಮಾರಿನಲ್ಲಿ ಮತ್ತೆ ಕೋಳಿಗಳ ಮೇಲೆ ದಾಳಿ ಮಾಡಲು ಆಗಮಿಸಿದ್ದ ಚಿರತೆಯು ಅಳವಡಿಸಿದ್ದ ಬೋನಿಗೆ ಸಿಲುಕಿಕೊಂಡಿದೆ. ಆನಂದ್ ಅವರ ಮನೆಯ ಪಕ್ಕದಲ್ಲಿ ನಾಲೆ ಕೂಡ ಹಾದುಹೋಗಿದೆ. ದಿಂಡಗೂರು ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಇದುವರೆಗೂ ತಾಲೂಕಿನಲ್ಲಿ ಮನುಷ್ಯರ ಮೇಲೆ ಯಾವುದೇ ದಾಳಿ ಆಗದಿದ್ದರೂ ಕೂಡ ಪದೇ ಪದೇ ನಾಯಿ, ಕೋಳಿ ಹಸುವಿನ ಕರುಗಳನ್ನು ತಿನ್ನುತ್ತಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ:

ಅರಣ್ಯ ಇಲಾಖೆಯವರು ತಿಳಿಸುವಂತೆ ಚಿರತೆ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಅದು ಬೆಕ್ಕಿನ ಜಾತಿಯ ಪ್ರಾಣಿ. ಚಿರತೆಯ ಮಾಹಿತಿ ಕಂಡು ಬಂದಲ್ಲಿ ಇಲಾಖೆಗೆ ತಿಳಿಸಿ ಎನ್ನುತ್ತಾರೆ. ಬೋನಿಗೆ ಸಿಲುಕಿದ್ದ ಚಿರತೆಯನ್ನು ಬೆಲಸಿಂದ ಸಸ್ಯಕ್ಷೇತ್ರಕ್ಕೆ ವಾಹನದ ಮೂಲಕ ಸಾಗಿಸಲಾಗಿದ್ದು ಆರೋಗ್ಯ ತಪಾಸಣೆ ನಂತರ ದಟ್ಟಾರಣ್ಯಕ್ಕೆ ಬಿಡುವುದಾಗಿ ಅರಣ್ಯಾಧಿಕಾರಿ ಖಲಂದರ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !