ದಿಗಂತ ವರದಿ ನಾಗಮಂಗಲ :
ಹಿಂದೂ ಯುವಕನ ಮೇಲೆ ಅನ್ಯ ಕೋಮಿನ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ, ಮನೆಗಳಿಗೆ ನುಗ್ಗಿ ಮಹಿಳೆಯರಿಗೆ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಬೆಳ್ಳೂರಿನಲ್ಲಿ ನಡೆದಿದ್ದು, ಈ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಬೆಳ್ಳೂರಿನ ಅಭಿಲಾಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಗುಂಪು ಇದೇ ವೇಳೆ ಇತರರ ಮೇಲೆ ಹಲ್ಲೆ ನಡಸಿ ಮನೆಗಳಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಮಹಿಳೆಯರಿಗೆ ಬೆದರಿಕೆಯೊಡ್ಡಿದೆ.
ಸೋಮವಾರ ರಾತ್ರಿ ಅನ್ಯ ಕೋಮಿನ ಗುಂಪು ದುಷ್ಕೃತ್ಯ ಎಸಗಿದ್ದು, ಇದರಿಂದ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು, ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಗಾಯಾಳು ಅಭಿಲಾಶ್ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ಶುಕ್ರವಾರ ಸಂತೆ ಬೀದಿ ರಸ್ತೆಯಲ್ಲಿ ಅಭಿಲಾಶ್, ನಾಗೇಶ್ ಮತ್ತು ಮುಸ್ಲಿಂ ಯುವಕರ ನಡುವೆ ಸಣ್ಣ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು, ಮಾರನೇ ದಿನ ಗಂಗಾ ಆರತಿ ಹಬ್ಬ ಆಚರಣೆಯಲ್ಲಿ ನಿರತರಾಗಿದ್ದಾಗ ತಡರಾತ್ರಿ ವೇಳೆ ಅಲ್ಲಿಗೆ ತೆರಳಿದ್ದ ಅನ್ಯ ಕೋಮಿನ ಗುಂಪು ಅವರಿಬ್ಬರನ್ನು ನಾವು ಬಿಡೋದಿಲ್ಲ, ನೀವು ಹಬ್ಬ ಮಾಡಿಕೊಳ್ಳಿ, ನಮ್ಮದು ಮದುವೆ ಇದೆ ಆಮೇಲೆ ಗತಿ ಕಾಣಿಸುತ್ತೇವೆ ಎಂದು ಮಹಿಳೆಯರನ್ನ ಬೆದರಿಸಿತ್ತು, ಇದರಿಂದ ಹೆದರಿದ ನಾಲ್ಕೈದು ಮಹಿಳೆಯರು ಬೆಳ್ಳೂರು ಪೊಲೀಸ್ ಠಾಣೆಗೆ ತೆರಳಿ ವಿಚಾರ ತಿಳಿಸಿ ದೂರು ನೀಡಲು ಮುಂದಾದಾಗ ಪೊಲೀಸರು ಬೆಳಿಗ್ಗೆ ಬನ್ನಿ ಎಂದು ಸಾಗ ಹಾಕಿದ್ದರು.