February 19, 2026
Thursday, February 19, 2026
spot_img

ದಶಕದ ಕನಸಿಗೆ ಮರುಜೀವ: ತುಳುನಾಡಿನ ತೊಕ್ಕೊಟ್ಟಿನಲ್ಲಿ ತಲೆಯೆತ್ತಲಿದೆ ಭವ್ಯ ‘ಅಬ್ಬಕ್ಕ ಭವನ’!

ಹೊಸದಿಗಂತ ಉಳ್ಳಾಲ:

ಸುಮಾರು ಹನ್ನೆರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟಿನ ಅಬ್ಬಕ್ಕ ಭವನ ನಿರ್ಮಾಣ ಯೋಜನೆಗೆ ಕೊನೆಗೂ ಮರುಜೀವ ಸಿಕ್ಕಿದೆ. ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಗುರುವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಕಟ್ಟಡ ನಿರ್ಮಾಣಕ್ಕೆ ಗಡಿ ಗುರುತು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಹಿಂದೆ ಸಚಿವರಾಗಿದ್ದ ರಮಾನಾಥ ರೈ ಅವರು ಶಂಕುಸ್ಥಾಪನೆ ನೆರವೇರಿಸಿದ್ದರೂ, ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. 2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಉಮಾಶ್ರೀ ಅವರು ಈ ಯೋಜನೆಗೆ 8 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗೃಹ ಮಂಡಳಿ ಹಾಗೂ ಜಿಲ್ಲಾಡಳಿತದ ನಡುವಿನ ಸಮನ್ವಯದಿಂದ ಅಡೆತಡೆಗಳು ನಿವಾರಣೆಯಾಗಿವೆ. ಶೀಘ್ರದಲ್ಲೇ ಸಚಿವ ಶಿವರಾಜ್ ತಂಗಡಗಿ ಅವರು ಅಬ್ಬಕ್ಕ ಭವನ ಹಾಗೂ ಕೊಣಾಜೆಯಲ್ಲಿ ನಿರ್ಮಾಣವಾಗಲಿರುವ ಬ್ಯಾರಿ ಭವನಕ್ಕೆ ಅಧಿಕೃತವಾಗಿ ಅಡಿಗಲ್ಲು ಹಾಕಲಿದ್ದಾರೆ.

ಉಳ್ಳಾಲ ತಾಲೂಕಿನ ‘ಮಿನಿ ಟೌನ್ ಹಾಲ್’ ಎಂದೇ ಬಿಂಬಿತವಾಗಲಿರುವ ಈ ಕಟ್ಟಡವು ಅನೇಕ ಸೌಲಭ್ಯಗಳನ್ನು ಹೊಂದಿರಲಿದೆ:

41 ಸೆಂಟ್ಸ್ ಜಾಗದಲ್ಲಿ 22,223 ಚದರ ಅಡಿಯ ಮೂರು ಅಂತಸ್ತಿನ ನಿರ್ಮಾಣ.

410 ಆಸನ ಸಾಮರ್ಥ್ಯದ ಸುಸಜ್ಜಿತ ಹಾಲ್.

ಮೀಟಿಂಗ್ ಹಾಲ್, ಗ್ರೀನ್ ರೂಮ್, ಕಾರ್ ಪಾರ್ಕಿಂಗ್ ಮತ್ತು ರಾಣಿ ಅಬ್ಬಕ್ಕಳ ಚರಿತ್ರೆ ಸಾರುವ ವಸ್ತುಸಂಗ್ರಹಾಲಯ.

ಬರುವ ಏಪ್ರಿಲ್ ತಿಂಗಳಿನಲ್ಲಿ ಸರ್ಕಾರದ ವತಿಯಿಂದಲೇ ಅತ್ಯಂತ ಅದ್ಧೂರಿಯಾಗಿ “ಅಬ್ಬಕ್ಕ ಉತ್ಸವ” ಆಯೋಜಿಸಲು ನಿರ್ಧರಿಸಲಾಗಿದೆ. ರಾಜಕೀಯ ರಹಿತವಾಗಿ ನಡೆಯಲಿರುವ ಈ ಸಂಭ್ರಮದ ಮೇಲುಸ್ತುವಾರಿಯನ್ನು ಮಹಿಳಾ ಸಮಿತಿಯೇ ವಹಿಸಿಕೊಳ್ಳಲಿದ್ದು, ಇದು ಉಳ್ಳಾಲದ ಸಾಂಸ್ಕೃತಿಕ ಗರಿಮೆಯಾಗಿ ಮೂಡಿಬರಲಿದೆ ಎಂದು ಯು.ಟಿ. ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ., ಗೃಹ ಮಂಡಳಿಯ ಅಭಿಯಂತರರಾದ ಸಹನಾ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !