ಹೊಸದಿಗಂತ ಹುಬ್ಬಳ್ಳಿ:
ಕ್ಷುಲ್ಲಕ ಕಾರಣಕ್ಕೆ ಭಿಕ್ಷುಕರಿಬ್ಬರು ಹೊಡೆದಾಡಿಕೊಂಡಿದ್ದು, ಅದರಲ್ಲಿ ಒಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಹಳೇ ಹುಬ್ಬಳ್ಳಿ ದಿಡ್ಡಿ ಓಣಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಭಿಕ್ಷುಕ ಮಿತಿಲೇಶಕುಮಾರ ಪಾಸ್ವಾನ(29), ಮೃತಪಟ್ಟಿದ್ದು, ರಾಜೇಶಕುಮಾರ ಕೊಲೆ ಮಾಡಿದ ಆರೋಪಿ.
ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿ ತಾಯಿ ಬಗ್ಗೆ ಮಿತಿಲೇಶಕುಮಾರ ಅವಾಚ್ಯವಾಗಿ ಮಾತಾಡಿದ್ದರಿಂದ ರಾಜೇಶಕುಮಾರ ಕೋಪಗೊಂಡು ಮೈಕ್ ಸ್ಟ್ಯಾಂಡ್ ನಿಂದ ಮಿತಿಲೇಶಕುಮಾರ ತಲೆಗೆ ಹೊಡೆದಿದ್ದಾನೆ.
ಇದರಿಂದ ಆತನಿಗೆ ಅತಿಯಾದ ರಕ್ತಸ್ರಾವಾಗಿ ಕೆಎಂಸಿಆರ್ ಐ ಆಸ್ಪತ್ರೆ ರವಾನಿಸುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ.
ಕೊಲೆಯಾದ ಮಿತಿಲೇಶಕುಮಾರ ಬಿಹಾರದವನಾಗಿದ್ದು, ಕೊಲೆ ಮಾಡಿದ ವ್ಯಕ್ತಿ ರಾಜೇಶಕುಮಾರ ಹರಿಯಾಣದವನು.
ಇಬ್ಬರು ವಿಕಲಚೇತನರಾಗಿದ್ದು, ಭಿಕ್ಷೆ ಬೇಡಿಕೊಂಡಿದ್ದರು. ಕಳೆದ ಮೂರು-ನಾಲ್ಕು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದು ಕುಟುಂಬಸ್ಥರ ಮನೆಯಲ್ಲಿ ವಾಸವಿದ್ದರು. ಹಬ್ಬದ ನಿಮಿತ್ತ ಕುಟುಂಬಸ್ಥರು ಊರಿಗೆ ಹೋದಾಗ ಈ ಘಟನೆ ನಡೆದಿದೆ.
ಹಳೇ ಹುಬ್ಬಳ್ಳಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಧ್ಯಮದವರೊಂದಿಗೆ ತಿಳಿಸಿದರು.