ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಭಾಗವತಿ ಗ್ರಾಮದ ರಸ್ತೆಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ, ವಾಹನ ಸವಾರರ ಎದೆಯಲ್ಲಿ ನಡುಕ ಹುಟ್ಟಿಸಿದ ಘಟನೆ ನಡೆದಿದೆ.
ರಸ್ತೆ ಮಧ್ಯದಲ್ಲೇ ಗಂಭೀರವಾಗಿ ನೆಲೆ ನಿಂತ ಆನೆಯು ಸುಮಾರು ಅರ್ಧ ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ಸಂಪೂರ್ಣ ಅಡ್ಡಿಪಡಿಸಿತು. ಆನೆಯನ್ನು ಕಂಡೊಡನೆ ಬೆಚ್ಚಿಬಿದ್ದ ಸವಾರರು, ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆನೆಯ ಗತ್ತು ಮತ್ತು ಜನರ ಆತಂಕವನ್ನು ಪ್ರತಿಬಿಂಬಿಸುತ್ತಿವೆ.
ಭಾಗವತಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗುತ್ತಿದೆ. ಸತತವಾಗಿ ಕಾಡಾನೆಗಳು ರಸ್ತೆಗಿಳಿಯುತ್ತಿರುವುದರಿಂದ ಈ ಭಾಗದ ಜನರಲ್ಲಿ ನಿರಂತರ ಭೀತಿ ಮನೆ ಮಾಡಿದೆ. “ಯಾವಾಗ ಎಲ್ಲಿ ಆನೆ ಎದುರಾಗುತ್ತದೋ” ಎಂಬ ಭಯದಲ್ಲಿ ಜನರು ಸಂಚರಿಸುವಂತಾಗಿದೆ.



