ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಆಯುಕ್ತ ಕಚೇರಿಗೆ ದೂರು ನೀಡಲು ಬಂದ ವ್ಯಕ್ತಿಯೋರ್ವ, ಅಲ್ಲೇ ಇದ್ದ ಬೈಕ್ಅನ್ನು ಕದ್ದೊಯ್ದಿರುವ ಘಟನೆ ತಿರುವನಂರಪುರಂ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ನಡೆದಿದೆ. ಆರೋಪಿಯನ್ನು ಅಮಲ್ ಸುರೇಶ್ ಎಂದು ಗುರುತಿಸಲಾಗಿದೆ.
ಗುರುವಾರ ಪೊಲೀಸ್ ಅಧಿಕಾರಿಯೊಬ್ಬರು ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಲು ಆಯುಕ್ತರ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ 1ರ ಸುಮಾರಿಗೆ ಕಚೇರಿಗೆ ಹೋಗುವ ಭರದಲ್ಲಿ ಕೀಯನ್ನು ಬೈಕ್ನಲ್ಲೇ ಬಿಟ್ಟು ಒಳ ಹೋಗಿದ್ದರು. ಜೊತೆಗೆ ಬೈಕ್ನಲ್ಲೇ ಬ್ಯಾಗ್ ಬಿಟ್ಟಿದ್ದರು. ಈ ಸಂದರ್ಭದಲ್ಲಿ ದೂರು ನೀಡಲು ಬಂದಿದ್ದ ಆರೋಪಿಯು ಬೈಕ್ನಲ್ಲೇ ಕೀ ಇರುವುದನ್ನು ನೋಡಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ತನ್ನ ಕೆಲಸ ಮುಗಿದ ಬಳಿಕ ಮಧ್ಯಾಹ್ನ 3ಕ್ಕೆ ಬಂದು ಬೈಕ್ ಹುಡುಕಾಡಿದಾಗ ಬೈಕ್ ಅಲ್ಲಿರಲಿಲ್ಲ. ತಕ್ಷಣಕ್ಕೆ ಅವರು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆರೋಪಿ ಸುರೇಶ್ ಕದೊಯ್ದಿರುವುದು ಗೊತ್ತಾಗಿದೆ.
ಅಧಿಕಾರಿ ದೂರಿನ ಮೇರೆಗೆ ಕಂಟೋನ್ಮೆಂಟ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 303(2) ರ ಅಡಿಯಲ್ಲಿ ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದಾರೆ.
ಆರೋಪಿ ಸುರೇಶ್, ಕಳ್ಳತನ ಪ್ರಕರಣದ ಇತಿಹಾಸ ಹೊಂದಿದ್ದಾನೆ. ಈತ ತನ್ನ ತಂದೆ ವಿರುದ್ಧ ದೂರು ದಾಖಲಿಸಲು ಕಮಿಷನರ್ ಕಚೇರಿಗೆ ಆಗಮಿಸಿದ್ದ. ಈ ವೇಳೆ ಕಚೇರಿಯಿಂದ ಹೊರಡುವಾಗ ಈ ಕಳ್ಳತನ ಮಾಡಿದ್ದಾನೆ. ಅದೇ ದಿನ ರಾತ್ರಿ ಮನವೀಯಂ ವಾದಿ ಬಳಿ ಆತನನ್ನು ಬಂಧಿಸಲಾಗಿದ್ದು. ವಾಹನ ಜಪ್ತಿ ಮಾಡಲಾಗಿದೆ.
ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸಿದಾಗ, ಪೊಲೀಸ್ ಅಧಿಕಾರಿಗಳು ತಾನು ನೀಡಿದ ದೂರನ್ನು ಸ್ವೀಕರಿಸಲಿಲ್ಲ. ಇದರಿಂದಾಗಿ ಮೋಟಾರ್ ಬೈಕ್ ಕದಿಯಲು ನಿರ್ಧರಿಸಿದೆ ಎಂದು ತಿಳಿಸಿದ್ದಾನೆ. ಆರೋಪಿಯನ್ನು ವಿಚಾರಣೆಯ ಭಾಗವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

