ಹೊಸ ದಿಗಂತ ವರದಿ,ಮಂಗಳೂರು:
ಸತ್ತ ನಾಯಿಯ ಶವವನ್ನು ತನ್ನ ದ್ವಿಚಕ್ರ ವಾಹನಕ್ಕೆ ಸರಪಳಿಯಿಂದ ಬಿಗಿದು ಶನಿವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಮುಖ್ಯ ರಸ್ತೆಯಲ್ಲಿ ಎಳೆದೊಯ್ದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಉಡುಪಿ ಜಿಲ್ಲಾ ಪ್ರಾಣಿದಯಾ ಸಂಘದ ಸದಸ್ಯೆ ಮಂಜುಳಾ ಕರ್ಕೆರಾ ಎಂಬವರು ಶಿರ್ವ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕಾಪುವಿನ ಕೊಂಬಗುಡ್ಡೆಯ ನಿವಾಸಿ ಖಾದರ್ ಎಂಬ ವ್ಯಕ್ತಿಯು ಸತ್ತ ನಾಯಿಯ ಕೊರಳಿಗೆ ಚೈನ್ ಬಿಗಿದು ದ್ವಿಚಕ್ರ ವಾಹನಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದಿರುವ ವ್ಯಕ್ತಿ. ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ಸುಮಾರು 5 ಕಿ.ಮೀ ದೂರದವರೆಗೆ ಎಳೆದುಕೊಂಡು ಹೋಗಿದ್ದಾನೆ. ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.