ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದ ಸಾನ್ವಿ ಮೃತ ಬಾಲಕಿ. ತಾಯಿ ಶ್ವೇತಾ ಮಗಳನ್ನು ಕೊಂದ ನಂತರ ತಾನೂ ಸಾಯುವುದಾಗಿ ಕಿರುಚಾಡುತ್ತಿದ್ದಳು. ಆಗ ಆಕೆಯನ್ನು ಸ್ಥಳೀಯರು ರಕ್ಷಿಸಿ, ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ಏಳು ವರ್ಷಗಳ ಹಿಂದೆ ಶಿವಮೊಗ್ಗದ ರಘು ಎಂಬವರ ಜೊತೆ ಶ್ವೇತಾ ವಿವಾಹವಾಗಿದ್ದರು. ಆರಂಭದಿಂದಲೂ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಸಾನ್ವಿಯನ್ನು ರಘು ಪೋಷಕರು ಸಾಕುತ್ತಿದ್ದರು.
ಗಂಡನಿಂದ ದೂರವಾಗಿ ಶ್ವೇತಾ ಕಳೆದ ಐದು ವರ್ಷಗಳಿಂದ ತವರು ಮನೆಯಲ್ಲಿದ್ದರು. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು. ಕುಟುಂಬಸ್ಥರು ಹಲವು ಬಾರಿ ರಾಜಿ ಸಂಧಾನ ಮಾಡಿದ್ದರು. ಆದರೂ ಗಂಡ-ಹೆಂಡತಿ ನಡುವೆ ಒಮ್ಮತ ಮೂಡಿರಲಿಲ್ಲ.
ಶ್ವೇತಾ ಅವರ ತಂದೆ-ತಾಯಿ ಇಬ್ಬರೂ ನಿಧನರಾಗಿದ್ದು, ಅವರ ಏಳು ಸಹೋದರಿಯರು ಎಲ್ಲರೂ ಮದುವೆಯಾಗಿದ್ದಾರೆ. ಆಗಾಗ್ಗೆ ತವರು ಮನೆಗೆ ಬಂದು, ಇವರಿಗಿರುವ ಅಲ್ಪ ಜಮೀನನ್ನು ಉಳುಮೆ ಮಾಡಿಸಿ ಬೆಳೆ ಬೆಳೆಯುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅಕ್ಕತಂಗಿಯರು ಬಂದು ಹೋಗುತ್ತಿದ್ದರು.