ಹೊಸದಿಗಂತ ವರದಿ, ಬೆಂಗಳೂರು:
ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವಿನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಕೃತ್ಯ ಎರಡು ವಾರಗಳ ಬಳಿಕ ಬೆಳಕಿಗೆ ಬಂದಿದೆ.
ಗಿರಿನಗರದ ವೀರಭದ್ರನಗರ ನಿವಾಸಿ ಶಾರಿನ್ ಎಂಬ ಮಹಿಳೆ ಪುಟ್ಟ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಪರಿಣಾಮ ಮಗಿವಿನ ದೇಹದ ತುಂಬಾ ವಿಪರೀತ ಗಾಯಗಳಾಗಿವೆ. ಶಾರಿನ್ ಕೆಲಸಕ್ಕೆ ಹೋಗುತ್ತಿದ್ದು, ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಬೀಗ ಹಾಕಿ ಹೋಗುವ ಈ ತಾಯಿ ರಾತ್ರಿ ಬರೋವರೆಗೂ ಮಗುವನ್ನು ಮನೆಯಲ್ಲಿ ಕೂಡಿ ಹಾಕುತ್ತಿದ್ದಳು. ಅಲ್ಲದೇ, ಮಗುವಿನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾಳೆ. ಗಂಡನಿಂದ ವಿಚ್ಛೇದನೆ ಪಡೆದುಕೊಂಡು ತನ್ನ ಪ್ರಿಯಕರನ ಜತೆ ನೆಲೆಸಿದ್ದಳು.
ಈ ಕುರಿತು ಮಗುವಿನ ತಾಯಿ ಶಾರಿನ್ನನ್ನು ಪ್ರಶ್ನಿಸಿದಾಗ ತಾನು ಗಂಡನೊಂದಿಗೆ ಇಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನು ಕೂಡಿಹಾಕಿ ಕೆಲಸ ಹುಡುಕುತ್ತಿರುವುದಾಗಿ ಹೇಳಿದ್ದಾಳೆ. ಸದ್ಯ ಗಿರಿನಗರ ಠಾಣೆ ಪೊಲೀಸರು ಈಕೆಯನ್ನು ಕರೆಸಿ ಬುದ್ದಿ ಹೇಳಿ ಕಳುಹಿಸಿದ್ದಾರೆ. ಹಾಗೂ ಎನ್ಸಿಆರ್ ಪ್ರಕರಣ ದಾಖಲಿಸಿ ಎಚ್ಚರಿಸಿ ಕಳಿಸಿದ್ದಾರೆ.
ಅಲ್ಲದೇ, ಸದ್ಯ ಮಗುವನ್ನು ಮಕ್ಕಳ ಆಯೋಗದ ರಕ್ಷಣೆ ಸುಪರ್ದಿಗೆ ನೀಡಲಾಗಿದ್ದುಘಿ, ಗಂಡ ಮತ್ತು ಹೆಂಡತಿ ಇಬ್ಬರಿಗೂ ಕೌನ್ಸಿಲಿಂಗ್ಗೆ ಒಳಗಾಗುವಂತೆ ಆಯೋಗ ಸೂಚನೆ ನೀಡಿದೆ. ಇಬ್ಬರೂ ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರೆ ಮಾತ್ರವಷ್ಟೇ ಮಗು ಒಪ್ಪಿಸುವುದಾಗಿ ಹೇಳಿದೆ.
ಮಗುವಿನ ಹೇಳಿಕೆ
ಮನೆಗೆ ಬಂದ ಅಂಕಲ್ ಒಬ್ಬರು ಕುಕ್ಕರ್ನಿಂದ ತಲೆಗೆ ಹೊಡೆದಿದ್ದರು. ನನ್ನಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದರು. ಎಂದು ಇದೆಲ್ಲವನ್ನೂ ಮಗುವು ಸ್ಥಳೀಯರೊಬ್ಬರ ಬಳಿ ಹೇಳಿಕೊಂಡಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಆಯೋಗವು ಮಗುವಿನ ರಕ್ಷಣೆಗೆ ಬಂದಿದೆ. ಪಾಪಿ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಮನೆಯಲ್ಲಿ ಕೂಡಿ ಹಾಕಿದ್ದ ಮಗುವನ್ನು ರಕ್ಷಿಸಿ, ಗೃಹ ಬಂಧನಕ್ಕೆ ಮುಕ್ತಿಕೊಟ್ಟಿದ್ದಾರೆ. ಇನ್ನು ಮೈತುಂಬ ಗಾಯಗೊಂಡಿದ್ದ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಹೊಡೆದಿದ್ದನ್ನು ಒಪ್ಪಿಕೊಂಡ ಮಹಾತಾಯಿ
ಮಗುವಿಗೆ ಹೊಡೆದಿರುವುದನ್ನು ಸ್ವತಃ ತಾಯಿ ಶಾರಿನ್ ಒಪ್ಪಿಕೊಂಡಿದ್ದಾಳೆ. ನಾನು ಮಗುವಿಗೆ ಹೊಡದಿದ್ದೇನೆ. ಆದರೆ ಮಗು ಬುದ್ಧಿಕಲಿಬೇಕು ಎಂದು ಮಾಡಿದ್ದೀನಿ. ಜೀವನದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಈ ರೀತಿ ಮಾಡಿದ್ದೀನಿ. ಮಗುವೇ ಸುಳ್ಳು ಹೇಳುತ್ತೆ. ನನಗೆ ಕೆಲಸ ಇರಲಿಲ್ಲ. ನನ್ನ ಗಂಡನ ಜೊತೆ ವಿಚ್ಛೇದನವಾಗಿದ್ದು, ಮನೆಯಲ್ಲಿ ನಾನು ಒಬ್ಬಳೇ ಇರುವುದು. ಹೀಗಾಗಿ ಮಗುವನ್ನ ಕೂಡಿ ಹಾಕುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.