ಹೊಸ ಶಕ್ತಿ, ಸ್ಫೂರ್ತಿ ಮತ್ತು ಸಂಕಲ್ಪಗಳ ಬೆಳಕಿನಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ-ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿಲ್ಲಿ ಭಾರತೀಯ ರೈಲ್ವೇ ಹೊಸ ಶಕ್ತಿ, ಸ್ಫೂರ್ತಿ ಮತ್ತು ಸಂಕಲ್ಪಗಳ ಬೆಳಕಿನಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಅಡಿಗಲ್ಲು ಹಾಕಿ ಮಾತನಾಡಿದ ಪ್ರಧಾನಿ, ವಿಕಸಿತ್ ಭಾರತ್ ಗುರಿಯತ್ತ ವೇಗವಾಗಿ ಸಾಗುತ್ತಿರುವ ನವ ಭಾರತವು ಅಮೃತ ಕಾಲದ ಆರಂಭವಾಗಿದೆ ಎಂದರು.

24,470 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ರೈಲ್ವೆ ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗಿದ್ದು, ಈ 508 ನಿಲ್ದಾಣಗಳು ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರಾಗಿದೆ ಎಂದರು.

ಪುನರಾಭಿವೃದ್ಧಿ ಯೋಜನೆಯು ರೈಲ್ವೆ ಮತ್ತು ಸಾಮಾನ್ಯ ನಾಗರಿಕರ ಜೊತೆಗೆ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬೃಹತ್ ಅಭಿಯಾನವಾಗಲಿದೆ ಎಂದು ಒತ್ತಿ ಹೇಳಿದರು. ಇದರ ಪ್ರಯೋಜನವನ್ನು ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ ಪ್ರಧಾನಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ 55 ಅಮೃತ್ ನಿಲ್ದಾಣಗಳು, ಮಧ್ಯಪ್ರದೇಶದಲ್ಲಿ ಅಂದಾಜು ರೂ. 1,000 ಕೋಟಿಯಲ್ಲಿ 34 ನಿಲ್ದಾಣಗಳು, 1,500 ಕೋಟಿ ವೆಚ್ಚದಲ್ಲಿ ಮಹಾರಾಷ್ಟ್ರದ 44 ನಿಲ್ದಾಣಗಳು, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಪ್ರಧಾನ ರೈಲು ನಿಲ್ದಾಣಗಳನ್ನು ಮರುಅಭಿವೃದ್ಧಿಗೊಳಿಸಲಾಗುವುದು ಎಂದರು.

ವಿಶ್ವದಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನದ ಬಗ್ಗೆ ಮಾತನಾಡಿದ ಪ್ರಧಾನಿ, ಭಾರತದ ಪರವಾಗಿ ಜಾಗತಿಕ ಆಸಕ್ತಿಯನ್ನು ಎತ್ತಿ ತೋರಿಸಿದರು. ಇದಕ್ಕೆ ಎರಡು ಪ್ರಮುಖ ಅಂಶಗಳಿವೆ ಎಂಬುದನ್ನು ವಿವರಿಸಿದರು.

  • ಮೊದಲನೆಯದಾಗಿ, ಭಾರತ ಜನರಿಂದ ಸ್ಥಿರವಾದ ಪೂರ್ಣ ಬಹುಮತದ ಸರ್ಕಾರದ ಚುನಾವಣೆ
  • ಎರಡನೆಯದಾಗಿ, ಸರ್ಕಾರವು ಮಹತ್ವಾಕಾಂಕ್ಷೆಯ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಮತ್ತು ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಅವಿರತವಾಗಿ ಶ್ರಮಿಸುತ್ತಿರುವುದ ಎಂಬ ಅಂಶವನ್ನು ಹೇಳಿದರು.

ಭಾರತೀಯ ರೈಲ್ವೇ ಕೂಡ ಇದನ್ನು ಸಂಕೇತಿಸುತ್ತದೆ. ಕಳೆದ 9 ವರ್ಷಗಳಲ್ಲಿ, ದೇಶದಲ್ಲಿ ಹಾಕಲಾದ ಹಳಿಗಳ ಉದ್ದವು ದಕ್ಷಿಣದ ಸಂಯೋಜಿತ ರೈಲ್ವೆ ಜಾಲಕ್ಕಿಂತ ಹೆಚ್ಚಾಗಿದೆ ಎಂದರು. ಕಳೆದ ವರ್ಷವೊಂದರಲ್ಲೇ ಭಾರತವು ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಸಂಯೋಜಿತ ರೈಲ್ವೆ ಜಾಲಕ್ಕಿಂತ ಹೆಚ್ಚಿನ ರೈಲು ಹಳಿಗಳನ್ನು ಹಾಕಿದೆ ಎಂದು ಹೇಳಿದರು. ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತಮ ಆಸನಗಳು, ಕಾಯುವ ಕೊಠಡಿಗಳನ್ನು ನವೀಕರಿಸಲಾಗಿದೆ ಮತ್ತು ಸಾವಿರಾರು ನಿಲ್ದಾಣಗಳಲ್ಲಿ ಉಚಿತ ವೈಫೈ ಕುರಿತು ಪ್ರಧಾನಿ ಪ್ರಸ್ತಾಪಿಸಿದ್ದಾರೆ.

ರೈಲ್ವೆ ದೇಶದ ಜೀವನಾಡಿ ಎಂದು ಬಣ್ಣಿಸಿದ ಪ್ರಧಾನಿ, ನಗರಗಳ ಗುರುತನ್ನು ರೈಲು ನಿಲ್ದಾಣಗಳೊಂದಿಗೆ ಕೂಡ ಜೋಡಿಸಲಾಗಿದೆ ಎಂದರು. ಇದರಿಂದಾಗಿ ನಿಲ್ದಾಣಗಳಿಗೆ ಆಧುನಿಕ ರೂಪ ನೀಡುವುದು ಅನಿವಾರ್ಯವಾಗಿದೆ ಎಂದರು. ನವೀಕರಿಸಿದ ನಿಲ್ದಾಣಗಳು ಪ್ರವಾಸೋದ್ಯಮವನ್ನು ಹೆಚ್ಚಿಸುವುದಲ್ಲದೆ, ಹತ್ತಿರದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತವೆ. ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯು ಕುಶಲಕರ್ಮಿಗಳಿಗೆ ಸಹಾಯ ಮಾಡುತ್ತದೆ ಮತ್ತು ಜಿಲ್ಲೆಯ ಬ್ರ್ಯಾಂಡಿಂಗ್‌ಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!