Thursday, December 25, 2025

ಅಂಕೋಲಾ ತಳಗದ್ದೆ ಬಳಿ ಹಳಿಯ ಮೇಲೆ ಹೋಗುತ್ತಿದ್ದ ವ್ಯಕ್ತಿಗೆ ರೈಲು ಡಿಕ್ಕಿ

ಹೊಸದಿಗಂತ ವರದಿ, ಅಂಕೋಲಾ:

ರೈಲು ಬಡಿದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ತಾಲೂಕಿನ ತಳಗದ್ದೆಯಲ್ಲಿ ಸಂಭವಿಸಿದೆ.

ಅಡಿಗೋಣದ ಹೆಗ್ರೆ ನಿವಾಸಿ ನಾಗೇಶ ಪೊಕ್ಕಾ ಗೌಡ (38) ಮೃತ ಯುವಕನಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದ ಈತ ವಿಪರೀತ ಸರಾಯಿ ಕುಡಿದು ಸರಿಯಾಗಿ ಊಟ ಮಾಡದೇ ಅನಾರೋಗ್ಯಕ್ಕೀಡಾದ ಕಾರಣ ಅ. 17 ರಂದು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.

ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಮನೆಗೆ ಹೋಗುವುದಾಗಿ ಹೇಳಿ ಮರಳಿದ ಈತ ಅಂಕೋಲಾದಿಂದ ಗೋಕರ್ಣಕ್ಕೆ ಹೋಗುವ ಬಸ್ಸಿನಲ್ಲಿ ಬಂದು ತಳಗದ್ದೆ ಕ್ರಾಸ್ ಬಳಿ ಬಸ್ಸಿನಿಂದ ಇಳಿದು ಓಡಿ ಹೋಗಿದ್ದ.

ತಳಗದ್ದೆಯಲ್ಲಿ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯಾವುದೋ ರೈಲು ಬಡಿದು ಗಂಭೀರವಾಗಿ ಗಾಯಗೊಂಡು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!