ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ ಆಮೆಗಳು ಮೊಟ್ಟೆ ಇಡುವ ಸಾಂಪ್ರದಾಯಿಕ ಸಮಯ ಬದಲಾಯಿಸುತ್ತಿದ್ದು, ಪ್ರಸ್ತುತ ಹೊನ್ನಾವರದ ಕಾಸರಕೋಡ ಟೊಂಕದ ಕಡಲತೀರದಲ್ಲಿ ಹಗಲಿನ ವೇಳೆಯಲ್ಲಿಯೂ ಸಹ ಮೊಟ್ಟೆ ಇಡುತ್ತಿವೆ..
ಕಳೆದ ಎರಡು ದಿನಗಳಿಂದ ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳು ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗಾಗಿ ಮೀಸಲಿಟ್ಟ ಜಾಗದಲ್ಲಿ ಮತ್ತು ಇಲ್ಲಿನ ಕಡಲತೀರದಲ್ಲಿ ಕಡಲಾಮೆಯೊಂದು ನೂರಾರು ಸಂಖ್ಯೆಯಲ್ಲಿ ಮೊಟ್ಟೆ ಇಟ್ಟು ಗೂಡನ್ನು ಮುಚ್ಚಿ ಇಡುತ್ತಿರುವ ಅಪರೂಪದ ಘಟನೆ ವರದಿಯಾಗಿದೆ.
ಕೂರ್ಮಗಳು ತಂಡೋಪತಂಡಗಳಾಗಿ ಟೊಂಕಾ ತೀರಕ್ಕೆ ಬಂದು ಮೊಟ್ಟೆ ಇಟ್ಟು, ಮೊಟ್ಟೆಯ ಗೂಡು ಕಟ್ಟಿವೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾಡಳಿತವು ಕಳೆದ ವರ್ಷ ಕಡಲಾಮೆ ಜೀವಂತ ಮೊಟ್ಟೆ ಗೂಡುಗಳ ಮೇಲೆ ಕಲ್ಲು- ಮಣ್ಣು ಸುರಿದು ಮುಚ್ಚಿ ಕಡಲತಡಿಯ ಮರಳು ತೀರದ ಮೇಲೆ ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ಮಾಡಿತ್ತು ಎಂದು ಸ್ಥಳೀಯ ಮೀನುಗಾರರು ಪರಿಸರ ಇಲಾಖೆಗೆ ದೂರು ನೀಡಿದ್ದರು ಮತ್ತು ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿ ಕಾಸರಕೋಡ ಟೊಂಕದ ಕಡಲತೀರದಲ್ಲಿ ಸಿಆರ್ ಝೆಡ್ ಮತ್ತು ಪರಿಸರ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಕಾಮಗಾರಿ ನಡೆಸದಂತೆ ವಾಣಿಜ್ಯ ಬಂದರು ನಿರ್ಮಾಣ ಕಂಪನಿ ಮತ್ತು ಬಂದರು ಇಲಾಖೆಯ ವಿರುದ್ಧ ತಡೆಯಾಜ್ಞೆ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.