ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ದೀಪೋತ್ಸವದಲ್ಲಿ ಬೆಳಗುವ ದೀಪಗಳು ಕೇವಲ ದೀಪಗಳಾಗಿರದೆ 500 ವರ್ಷಗಳ ಅಂಧಕಾರದಿಂದ ಹೊರಬಂದ ಶ್ರದ್ಧೆಯ ವಿಜಯದ ಸಂಕೇತವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ದೀಪೋತ್ಸವಕ್ಕೂ ಮುನ್ನ ಮಾತನಾಡಿದ ಅವರು, ದೀಪಗಳು 500 ವರ್ಷಗಳಲ್ಲಿ ನಾವು ಸಹಿಸಿದ ಅಪಮಾನ ಮತ್ತು ನಮ್ಮ ಪೂರ್ವಿಕರು ನಡೆಸಿದ ಹೋರಾಟದ ಸಂಕೇತವಾಗಿವೆ. ಸತ್ಯವನ್ನು ಎಂದಿಗೂ ಸೋಲಿಸಲಾಗದು ಎಂಬುದನ್ನು ಪ್ರತಿಯೊಂದು ದೀಪ ನೆನಪಿಸುತ್ತದೆ.
ಸನಾತನ ಧರ್ಮ 500 ವರ್ಷಗಳ ಕಾಲ ನಿರಂತರವಾಗಿ ಹೋರಾಡಿದೆ. ಈ ಹೋರಾಟಗಳ ಪರಿಣಾಮ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿದೆ ಎಂದರು. ಲಕ್ಷಾಂತರ ದೀಪಗಳನ್ನು ಬೆಳಗುವ ಸಮಯದಲ್ಲಿ ರಾಮಜನ್ಮಭೂಮಿ ಆಂದೋಲನವನ್ನು ಮರೆಯುವಂತಿಲ್ಲ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಶ್ರೀರಾಮನನ್ನು ಕಾಲ್ಪನಿಕ ಎಂದು ಜರಿದಿವೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಈ ಪಕ್ಷಗಳು ತಿರಸ್ಕರಿಸಿ ದ್ವಂದ್ವ ನಿಲುವು ತೋರಿವೆ ಎಂದರು.
500 ವರ್ಷಗಳ ಅಂಧಕಾರದಿಂದ ಹೊರಬಂದ ವಿಜಯದ ಸಂಕೇತ: ಅಯೋಧ್ಯೆ ದೀಪೋತ್ಸವದಲ್ಲಿ ಭಾವುಕರಾದ ಯೋಗಿ
