ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಘರ್ಷಣೆ ಏರ್ಪಟ್ಟಿತು. ಚೀನಾ ಗಡಿ ವಿವಾದ ಮತ್ತು ಅಮೆರಿಕದೊಂದಿಗಿನ ಇತ್ತೀಚಿನ ವ್ಯಾಪಾರ ಒಪ್ಪಂದದ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
“ನಾನು ವಿರೋಧ ಪಕ್ಷದ ನಾಯಕ. ಸಂಸತ್ತಿನಲ್ಲಿ ಮಾತನಾಡುವುದು ನನ್ನ ಹಕ್ಕು. ಆದರೆ ಚೀನಾ ವಿಷಯ ಪ್ರಸ್ತಾಪಿಸಿದಾಗಲೆಲ್ಲಾ ನನ್ನ ದನಿಯನ್ನು ಹತ್ತಿಕ್ಕಲಾಗುತ್ತಿದೆ,” ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಯುಎಸ್-ಭಾರತ ವ್ಯಾಪಾರ ಒಪ್ಪಂದಕ್ಕೆ ನಿನ್ನೆ ರಾತ್ರಿ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ. ಪ್ರಧಾನಿಯವರು ತೀವ್ರ ಒತ್ತಡದಲ್ಲಿದ್ದು, ತಮ್ಮ ಇಮೇಜ್ ಉಳಿಸಿಕೊಳ್ಳಲು ದೇಶದ ಹಿತಾಸಕ್ತಿಯನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:
“ಪ್ರಧಾನಿ ಮೋದಿಯವರು ಗೊಂದಲದಲ್ಲಿದ್ದಾರೆ. ಈ ವ್ಯಾಪಾರ ಒಪ್ಪಂದದ ಮೂಲಕ ದೇಶದ ಜನರ ಕಠಿಣ ಪರಿಶ್ರಮವನ್ನು ಅವರು ಮಾರಾಟ ಮಾಡಿದ್ದಾರೆ,” ಎಂದು ರಾಹುಲ್ ಕಿಡಿಕಾರಿದರು.
ರಾಹುಲ್ ಗಾಂಧಿಯವರ ಟೀಕೆಗಳಿಗೆ ಉತ್ತರಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ರಾಹುಲ್ ಗಾಂಧಿ ಅವರು ಸದನದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಒಂದೇ ವಿಷಯವನ್ನು ಪದೇ ಪದೇ ಪುನರಾವರ್ತಿಸುವ ಮೂಲಕ ಸದನದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅವರು ನಿಯಮಗಳನ್ನು ಪಾಲಿಸಲಿ,” ಎಂದು ತಿರುಗೇಟು ನೀಡಿದರು.



