ಹೊಸದಿಗಂತ ವರದಿ,ಮಳವಳ್ಳಿ
ಸಾಲ ಬಾಧೆ ತಾಳಲಾರದೇ ಯುವ ರೈತನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುಂಡಾಪುರ ಗ್ರಾಮದಲ್ಲಿ ನಡೆದಿದೆ.
ಗುಂಡಾಪುರ ಗ್ರಾಮದ ನಿವಾಸಿ ಜಿ.ಬಿ.ನಂಜುಂಡಯ್ಯ ಅವರ ಪುತ್ರ ಜಿ.ಎನ್.ನಂಜುಂಡಸ್ವಾಮಿ (27) ಮೃತ ವ್ಯಕ್ತಿ.
ತಮ್ಮ ತಂದೆಯವರಿಗೆ ಸೇರಿದ್ದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಕೃಷಿ ಚಟುವಟಿಕೆಗಳಿಗಾಗಿ ದಳವಾಯಿಕೋಡಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ರೂ. 80 ಸಾವಿರ ಸೇರಿದಂತೆ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸುಮಾರು ,6 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿದ್ದರು. ಕೃಷಿ ಚಟುವಟಿಕೆಯಿಂದ ಸಾಲ ತೀರಿಸಲು ಸಾಧ್ಯವಾಗದೇ ಮನನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಮನೆಯ ಬಾಗಿಲು ಹಾಕಿದ್ದನ್ನು ಗಮನಿಸಿದ ಪತ್ನಿ ಎಚ್.ಎಸ್.ಪಲ್ಲವಿ ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ನೆರೆ ಹೊರೆ ಯವರ ಸಹಾಯದಿಂದ ಬಾಗಿಲು ಒಡೆದು ಮಳವಳ್ಳಿ ತಾಲೋಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪತ್ನಿ ಎಚ್.ಎಸ್.ಪಲ್ಲವಿ ದೂರು ದಾಖಲಿಸಿದ್ದಾರೆ.
ತಾಲೋಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬದ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.