ಹೊಸದಿಗಂತ ವರದಿ, ಮಂಡ್ಯ:
ಯುವಕನೋರ್ವ ಪ್ರಿಯತಮೆಯನ್ನು ಕೊಂದು ತನ್ನ ಜಮೀನಿನಲ್ಲೇ ಶವ ಬಚ್ಚಿಟ್ಟ ಅಮಾನವೀಯ ಘಟನೆ ಕೆ.ಆರ್. ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ ಎಂಬುವವರೇ ಹತ್ಯೆಯಾದ ಮಹಿಳೆಯಾಗಿದ್ದಾರೆ. ಪುನೀತ್ ಎಂಬಾತನೇ ಕೊಲೆಮಾಡಿದ ಆರೋಪಿಯಾಗಿದ್ದಾನೆ.
ಪ್ರೀತಿಗೆ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರು, ಮಂಡ್ಯ ಎಂದು ಟ್ರಿಪ್ ಹೋಗಿದ್ದ ಇಬ್ಬರು ಜಾಲಿ ಜಾಲಿಯಾಗಿ ಸಮಯ ಕಳೆದಿದ್ದರು.
ನಂತರ ಏನಾಯ್ತೋ ಏನೋ ಗೊತ್ತಿಲ್ಲ. ಕೆ.ಆರ್. ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಈತ ಆಕೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟು ಪರಾರಿಯಾಗಿದ್ದಾನೆ.
ಪ್ರೀತಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪುನೀತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರೀತಿ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದು ದುರಂತ ಅಂತ್ಯ ಕಂಡಿದ್ದಾಳೆ. ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ.