ಹೊಸದಿಗಂತ ವರದಿ ಅಂಕೋಲಾ:
ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದ ಚಿರತೆ ಯುವಕನೋರ್ವನ ಮೇಲೆ ದಾಳಿ ನಡೆಸಿ ಓಡಿ ಹೋದ ಘಟನೆ ತಾಲೂಕಿನ ವಾಸರಕುದ್ರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಗದ್ದೆಯಲ್ಲಿ ಸಂಭವಿಸಿದ್ದು ಗ್ರಾಮಸ್ಥರು ಆತಂಕಗೊಳ್ಳುವಂತಾಗಿದೆ.
ಉಳಗದ್ದೆ ನಿವಾಸಿ ಸಂತೋಷ ಗೌಡ (24) ಎಂಬಾತ ಚಿರತೆ ದಾಳಿಗೆ ಸಿಲುಕಿದ ಯುವಕನಾಗಿದ್ದು ಈತನ ಎರಡೂ ಕೈಗಳಿಗೆ ಚಿರತೆ ಪರಚಿ ಗಾಯಗೊಳಿಸಿದೆ.
ಯುವಕ ಶನಿವಾರ ಬೆಳಿಗ್ಗೆ ತನ್ನ ಮನೆಯ ಪಕ್ಕದಲ್ಲಿ ಇರುವ ನಿರ್ಮಾಣ ಹಂತದಲ್ಲಿ ಇರುವ ಮನೆ ಕಟ್ಟಡದೊಳಗೆ ಹೋಗಿದ್ದ ಸಂದರ್ಭದಲ್ಲಿ ಕಟ್ಟದೊಳಗೆ ಇದ್ದ ಚಿರತೆ ದಾಳಿ ನಡೆಸಿದ್ದು ಯುವಕ ಬೊಬ್ಬೆ ಹಾಕುವುದು ಕೇಳಿ ಮನೆಯವರು ಮತ್ತು ಅಕ್ಕ ಪಕ್ಕದ ಜನ ಓಡಿ ಬಂದಾಗ ಚಿರತೆ ಅಲ್ಲಿಂದ ಓಡಿ ಹೋಗಿರುವುದಾಗಿ ತಿಳಿದು ಬಂದಿದೆ.
ಗಾಯಾಳು ಯುವಕನನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳಗದ್ದೆ ಭಾಗದಲ್ಲಿ ಜನವಸತಿ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚಿರತೆ ಓಡಾಟ ನಡೆಸುತ್ತಿರುವ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು ಹಲವು ಜಾನುವಾರುಗಳ ಮೇಲೆ ಸಹ ಚಿರತೆ ದಾಳಿ ನಡೆಸಿ ಹೊತ್ತೊಯ್ದಿರುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ.
ಜನವಸತಿ ಪ್ರದೇಶದಲ್ಲಿ ಹಾವಳಿ ಎಬ್ಬಿಸುತ್ತಿರುವ ಚಿರತೆಯ ಕುರಿತು ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹ ಗ್ರಾಮಸ್ಥರಿಂದ ಕೇಳಿ ಬಂದಿದೆ.