ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೆಸ್ಸೆಸ್ ನ ಶಾಖೆಗಳಂತೆ ಇನ್ನು ಮುಂದೆ ಆಮ್ ಆದ್ಮಿ ಪಕ್ಷವು ʼತಿರಂಗಾ ಶಾಖೆʼ ಗಳನ್ನು ನಡೆಸಲಿದೆ. ಹೆಚ್ಚಿನ ಪ್ರಮಾಣದಲ್ಲಿ ಜನರ ಸಂಪರ್ಕಕ್ಕೆ ಬರಲು ಈ ಯೋಜನೆ ಹಾಕಿಕೊಳ್ಳಲಾಗಿದ್ದು ಈ ಶಾಖೆಗಳ ಮೂಲಕ ʼನೈಜ ರಾಷ್ಟ್ರೀಯತೆʼಯನ್ನು ಜನರಿಗೆ ತಿಳಿಸುತ್ತೇವೆ ಎಂದು ʼತಿರಂಗಾ ಶಾಖೆʼಗಳ ಪಿತಾಮಹ ಎಎಪಿ ವಕ್ತಾರ ವೈಭವ್ ಮಹೇಶ್ವರಿ ಹೇಳಿದ್ದಾರೆ.
ಜುಲೈನಲ್ಲಿ ಉತ್ತರ ಪ್ರದೇಶದ ಹಳ್ಳಿಹಳ್ಳಿಗಳಲ್ಲಿ ಈ ಶಾಖೆಗಳು ಪ್ರಾರಂಭಗೊಳ್ಳಲಿವೆ. ಆರೆಸ್ಸೆಸ್ ನಂತೆ 10,000 ʼತಿರಂಗಾ ಶಾಖಾಪ್ರಮುಖ್ʼರನ್ನು ಆಪ್ ವತಿಯಿಂದ ನೇಮಿಸಲಾಗಿದೆ. 2022 ರ ಯುಪಿ ಚುನಾವಣೆಗೂ ಮೊದಲು ರಾಜ್ಯದ 75 ಜಿಲ್ಲೆಗಳಲ್ಲಿ ತಿರಂಗಾ ಶಾಖಾ ಪ್ರಾರಂಭವಾಗಿ ಕಾರ್ಯಚಟುವಟಿಕೆ ಪ್ರಾರಂಭಿಸಲಿದೆ.
ಪಕ್ಷದ ವಕ್ತಾರ ವೈಭವ್ ಮಹೇಶ್ವರಿ ಅವರ ಪ್ರಕಾರ “ಆಪ್ ಶಾಖೆಗಳಲ್ಲಿ ಕೇಸರಿ ಧ್ವಜದ ಬದಲಾಗಿ ಭಾರತದ ತ್ರಿವರ್ಣ ಧ್ವಜ ಹಾರಾಡಲಿದೆ. ಇದರಡಿಯಲ್ಲಿ ಮೊದಲು ಎಲ್ಲಾ ನೇಮಕಗೊಂಡ ಸ್ವಯಂಸೇವಕರು ಭಾರತದ ಸಂವಿಧಾನದ ಪೀಠಿಕೆಯನ್ನು ಒಟ್ಟಾಗಿ ಹೇಳುತ್ತಾರೆ. ನಂತರ ಮಹಾತ್ಮಾ ಗಾಂಧಿ, ಭೀಮರಾವ್ ಅಂಬೇಡ್ಕರ್, ಭಗತ್ ಸಿಂಗ್, ಅಶ್ಫಾಕುಲ್ಲಾ ಖಾನ್ ಮತ್ತು ಇತರ ವ್ಯಕ್ತಿಗಳ ಬಗ್ಗೆ ʼನಾಯಕರುʼ ಮಾತನಾಡುತ್ತಾರೆ. ಸಭೆಗಳನ್ನು ನಡೆಸಲು ಪಕ್ಷವು 10,000 ‘ತಿರಂಗ ಶಾಖಾ ಪ್ರಮುಖರನ್ನು ನೇಮಿಸುತ್ತದೆ”
“ಈ ಶಾಖೆಗಳು ಉತ್ತಮ ಆರೋಗ್ಯ ಮೂಲಸೌಕರ್ಯ, ಶಿಕ್ಷಣ, ನಿರುದ್ಯೋಗದಂತಹ ದೇಶದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುತ್ತವೆ ಮತ್ತು ರಾಜಕೀಯ ಮತ್ತು ಅದರಲ್ಲಿ ಭಾಗವಹಿಸುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತವೆ. ಈ ಶಾಖೆಗಳಿಗೆ ಸಮಾಜದ ಎಲ್ಲಾ ವರ್ಗಗಳ ರಾಜಕೀಯೇತರ ಜನರನ್ನು ನಾವು ಆಹ್ವಾನಿಸುತ್ತೇವೆ. ಆರೆಸ್ಸೆಸ್ ನಂತೆ ಮಹಿಳೆಯರಿಗೆ ನಿಷೇಧವನ್ನು ಹೇರುದಿಲ್ಲ. ಜಾತಿ,ಮತ,,ಪಂಥಗಳ ಭೇದವಿಲ್ಲದೇ ಎಲ್ಲ ವರ್ಗದ ಜನರಿಗೆ ಮುಕ್ತವಾಗಿರಲಿವೆ. ಪ್ರತಿ ಬ್ಲಾಕ್ ಮಟ್ಟದಲ್ಲಿಇವು ನಡೆಯಲಿದ್ದು ಪಕ್ಷವು 30 ಮನೆಗಳಿಗೆ ಮೊಹಲ್ಲಾ ಪ್ರಭಾರಿಯನ್ನು ನೇಮಿಸುತ್ತದೆ. ವರ್ಷದ ಕೊನೆಯಲ್ಲಿ ನಡೆಯಲಿರುವ ನಾಗರಿಕ ಚುನಾವಣೆಗಳಲ್ಲಿ ತಿರಂಗಾ ಶಾಖೆಗಳ ಮೂಲಕವೇ ಮುನ್ನಡೆಯಲಾಗುತ್ತದೆ. ಆರೆಸ್ಸೆಸ್ ನಿರ್ಮಿಸಿದ ವಿಷಪೂರಿತ ವಾತಾವರಣವನ್ನು ತಿರಂಗಾ ಶಾಖೆಗಳು ಶುದ್ಧಗೊಳಿಸುತ್ತವೆ” ಎಂಬುದು ಪಕ್ಷ ನೀಡುವ ವಿವರಣೆ.