ಹೊಸದಿಗಂತ ಚಿತ್ರದುರ್ಗ:
ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತ ಹಾಗೂ ಸಾವು ನೋವುಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ತೀರ್ಮಾನವೇ ಕಾರಣ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಹದಿನೆಂಟು ವರ್ಷ ನಂತರ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡಕ್ಕೆ ಸನ್ಮಾನಿಸಲು ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಎಂ.ಎನ್.ಕರಿಬಸವನ ಗೌಡ ಅವರ ಎಚ್ಚರಿಕೆಯ ನಡುವೆಯೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು. ಆತುರದ ಯೋಜನೆ ಹಾಗೂ ವ್ಯವಸ್ಥಿತ ತಯಾರಿ ಇಲ್ಲದೆ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯ ಆಯೋಜನೆಯ ಪರಿಣಾಮ ೧೧ ಯುವ ಜನರು ಸಾವಿಗೆ ಈಡಾಗಿದ್ದು ಈ ನಾಡಿನ ದುರ್ದೈವದ ಸಂಗತಿ ಎಂದು ಎಬಿವಿಪಿ ಪದಾಧಿಕಾರಿಗಳು ಕಿಡಿಕಾರಿದರು.
ಈ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ, ಪೊಲೀಸ್ ಇಲಾಖೆ, ಕೆಎಸ್ಸಿಎ, ಆರ್ಸಿಬಿ ಮ್ಯಾನೇಜೈಂಟ್ ಹಾಗೂ ಜನರ ಅತಿರೇಕದ ನಡವಳಿಕೆ ಸೇರಿದಂತೆ ಹಲವಾರು ಹಂತಗಳಲ್ಲಿ ಲೋಪಗಳಾಗಿದ್ದು ಕಣ್ಣಿಗೆ ಕಾಣುವ ಸತ್ಯ. ಈ ಪ್ರಕರಣದ ತೀವ್ರತೆಯನ್ನು ಅರಿತು ರಾಜ್ಯ ಸರ್ಕಾರ ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ. ನ್ಯಾಯಾಂಗ ತನಿಖೆ, ಸಿಐಡಿ ತನಿಖೆ ಈ ರೀತಿ ಬಹುವಿಧದ ತನಿಖೆಗಳಿಗೆ ಆದೇಶಿಸಿ, ಹಲವು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿರುವುದು ಅಕ್ಷಮ್ಯ ಎಂದರು.
ಈ ಕಾಲ್ತುಳಿತ ಪ್ರಕರಣಕ್ಕೆ ನೇರ ಹೊಣೆಗಾರರಾಗಿರುವ ಅಧಿಕಾರಿಗಳ ಮೇಲೆ ದರ್ಪ ತೋರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾವೇ ಐಪಿಎಲ್ ಟ್ರೋಫಿ ಜೈಸಿದ ಉಮೇದಿನಲ್ಲಿದ್ದ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಬೇಜವಾಬ್ದಾರಿತನದ ನಡವಳಿಕೆಗಳನ್ನು ಒಪ್ಪಿಕೊಳ್ಳದಿರುವುದು ಈ ನಾಡಿನ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ದೇಶದಲ್ಲಿ ಕಳೆದೊಂದು ವರ್ಷದಲ್ಲಿ ಅತ್ಯಂತ ಹೆಚ್ಚು ಜನ ಸಂದಣಿ ಇರುವ ಕಾರ್ಯಕ್ರಮಗಳಲ್ಲಿ ಕಾಲ್ತುಳಿತಕ್ಕೊಳಗಾಗಿ ಈಗಾಗಲೇ ನೂರಾರು ಜನರು ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಉತ್ತರ ಪ್ರದೇಶ ಗೋವಾ ಹಾಗೂ ತಿರುಪತಿ ಸೇರಿದಂತೆ ಸಾಕ? ಕಡೆ ಇಂತಹ ಘಟನೆಗಳು ನಡೆದ ಉದಾಹರಣೆ ಸಹಿತ ಪ್ರಕರಣಗಳು ಕಣ್ಣ ಮುಂದಿವೆ. ಆದಾಗ್ಯೂ ಮುಂಜಾಗ್ರತೆ ಕ್ರಮ ವಹಿಸದೆ ಇದ್ದದ್ದು ಆಡಳಿತಗಾರರ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣದ ಸೂಕ್ತ ತನಿಖೆ ನೆಡಸದೆ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸುವ ಮತ್ತು ಅವರ ಸಾಮರ್ಥ್ಯವನ್ನು ಪ್ರಶ್ನಿಸುವಂತಹ ಅಮಾನತ್ತು ಆದೇಶವನ್ನು ಹಿಂಪಡೆಯಬೇಕು. ಈ ದುರ್ಘಟನೆಯ ನೈತಿಕ ಹೊಣೆಗಾರಿಕೆಯಿಂದ ನುಣಚಿಕೊಳ್ಳದಂತೆ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಉತ್ತರದಾಯಿತ್ವದ ಅರಿವು ಮೂಡಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ