ಹೊಸದಿಗಂತ ವರದಿ ದಾವಣಗೆರೆ:
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಮೇರೆಗೆ ಬೆಸ್ಕಾಂ ಸಿವಿಲ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ದಾವಣಗೆರೆ ಮನೆ, ಕಚೇರಿ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂಬೆಳಿಗ್ಗೆಯೇ ದಾಳಿ ಕೈಗೊಂಡು ಪರಿಶೀಲಿಸಿದ್ದಾರೆ.
ದಾವಣಗೆರೆ ಬೆಸ್ಕಾಂ ಕಚೇರಿಯ ಸಿವಿಲ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಹೆಚ್.ಅರ್ಜುನ್ ಮನೆ, ಕಚೇರಿ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ತಂಡ ದಾಳಿ ನಡೆಸಿ ಶೋಧ ಕೈಗೊಂಡರು.
ನಗರದ ನಿಟುವಳ್ಳಿಯ ಕೊಠಡಿ, ಬೆಸ್ಕಾಂ ಕಚೇರಿ ಹಾಗೂ ಶಿವಮೊಗ್ಗದ ಗೋಪಾಳದ ವಾಣಿಜ್ಯ ಮಳಿಗೆಗಳ ಸಂಕೀರ್ಣ, ರಿಪ್ಪನ್ ಪೇಟೆಯ ತಳಲೆ ಗ್ರಾಮ ಸಮೀಪದ ತೋಟದ ಮನೆಗಳ ಮೇಲೆ ದಾವಣಗೆರೆ-ಶಿವಮೊಗ್ಗ ಜಿಲ್ಲೆಗಳ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಆಸ್ತಿ ಪತ್ರಗಳು, ದಾಖಲೆಗಳು, ಬ್ಯಾಂಕ್ ಖಾತೆಗಳ ವಿವರಗಳು, ವಾಣಿಜ್ಯ ಸಂಕೀರ್ಣ, ಮನೆ, ತೋಟದ ಮನೆ, ಭೂಮಿಗೆ ಸೇರಿದ ದಾಖಲೆ ಸೇರಿದಂತೆ ಮಹತ್ವದ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ದಾಳಿ ವೇಳೆ ಕೆಲವು ಕಡೆ ಲೆಕ್ಕಪತ್ರಗಳು, ವಿವಿಧ ದಾಖಲೆಗಳನ್ನು ಪಡೆಯಲಾಗಿದೆ. ಗುರುವಾರ ಸಂಜೆಯೂ ತನಿಖೆ, ಪರಿಶೀಲನೆ ಮುಂದುವರೆದಿತ್ತು.



