ವಂಚಕ ಸುಕೇಶ್‌ ಚಂದ್ರಶೇಖರ್‌ ಗೆ ಸಹಾಯದ ಆರೋಪ: ತಿಹಾರ್‌ ಜೈಲಿನ ಉನ್ನತ ಅಧಿಕಾರಿ ವರ್ಗಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ವಂಚಕ ಸುಕೇಶ್‌ ಚಂದ್ರಶೇಖರ್ ತಿಹಾರ್‌ ಜೈಲಿನಲ್ಲಿದ್ದಾಗ ಆತನಿಗೆ ಹೆಚ್ಚಿನ ಸಹಾಯ ಮಾಡಲಾಗಿದೆ ಎಂಬ ಆರೋಪದಡಿಯಲ್ಲಿ ದೆಹಲಿಯ ತಿಹಾರ್ ಜೈಲಿನ ಡೈರೆಕ್ಟರೇಟ್ ಜನರಲ್ ಸಂದೀಪ್ ಗೋಯಲ್ ಅವರನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ. ಜೈಲಿನಲ್ಲಿ ಐಷಾರಾಮಿ ಜೀವನ ನಡೆಸಲು ಸುಕೇಶ್ ಇತ್ತೀಚೆಗೆ ಸಂದೀಪ್ ಗೋಯಲ್ ಅವರಿಗೆ 12.50 ಕೋಟಿ ರೂ. ನೀಡಿದ್ದ ಎಂದು ಆರೋಪಿಸಲಾಗಿದೆ.

ಸುಕೇಶ್ ಚಂದ್ರಶೇಖರ್ ವಿವಾದದಲ್ಲಿ ಸಿಲುಕಿದ್ದ ತಿಹಾರ್ ಜೈಲ್ ಡಿಜಿ ಸಂದೀಪ್ ಗೋಯಲ್ ಅವರನ್ನು ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಮತ್ತು ವಿಶೇಷ ಪೊಲೀಸ್ ಆಯುಕ್ತ ಸಂಜಯ್ ಬೇನಿವಾಲ್ ಅವರನ್ನು ತಿಹಾರ್‌ನ ಹೊಸ ಡಿಜಿಯನ್ನಾಗಿ ನೇಮಕಗೊಳಿಸಲಾಗಿದೆ. ದೆಹಲಿಯ ಲೆಫ್ಟಿನೆಂಟ್-ಗವರ್ನರ್ ವಿಕೆ ಸಕ್ಸೇನಾ ಅವರು ಈ ಆದೇಶಗಳನ್ನು ಹೊರಡಿಸಿದ್ದಾರೆ.

ಗೋಯಲ್ ಅವರ ಕಣ್ಗಾವಲಿನಲ್ಲಿ ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಸುಕೇಶ್ ಚಂದ್ರಶೇಖರ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಮತ್ತು ಅವರಿಂದ ಲಂಚ ಪಡೆದ ಆರೋಪದ ಮೇಲೆ 81 ಕ್ಕೂ ಹೆಚ್ಚು ಜೈಲು ಅಧಿಕಾರಿಗಳನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಜೈಲಿನೊಳಗೆ ಇದ್ದಾಗ, ಅವರಿಗೆ ಮೊಬೈಲ್ ಫೋನ್‌ಗಳು, ಟಿವಿ ಮತ್ತು ಫ್ರಿಡ್ಜ್‌ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು ಎನ್ನಲಾಗಿದೆ.

ಯಾವುದೇ ಅನುಮತಿ ಅಥವಾ ಪ್ರವೇಶದ ದಾಖಲೆಯಿಲ್ಲದೆ ಜೈಲಿನೊಳಗೆ ಸುಕೇಶ್ ಅವರನ್ನು ಭೇಟಿಯಾಗಲು ಮಹಿಳಾ ಸೆಲೆಬ್ರಿಟಿಗಳಿಗೂ ಅವಕಾಶ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ವಾರದ ಆರಂಭದಲ್ಲಿ, ಸುಕೇಶ್ ಚಂದ್ರಶೇಖರ್ ದೆಹಲಿಯ ಎಲ್-ಜಿ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದು ಬಂಧಿತ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರಿಗೆ ‘ರಕ್ಷಣಾ ಹಣ’ ಎಂದು 10 ಕೋಟಿ ರೂ. ಪಾವತಿಸಿದ್ದೇನೆ ಎಂದು ಉಲ್ಲೇಖಿಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!