ಹೊಸದಿಗಂತ ವರದಿ,ಮಡಿಕೇರಿ:
ಹಾರಂಗಿ ವೃಕ್ಷೋದ್ಯಾನ ಮತ್ತು ಸಾಕಾನೆ ಶಿಬಿರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರ ಗಮನಸೆಳೆದು ಅಗತ್ಯ ಕ್ರಮಕೈಗೊಳ್ಳುವುದಾಗಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಅವರು ತಿಳಿಸಿದರು. ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಪ್ರವಾಸಿಗರನ್ನು ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಆಗಬೇಕಾದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.
ಆ ನಿಟ್ಟಿನಲ್ಲಿ ಪ್ರವೇಶ ದ್ವಾರದಿಂದ ಆನೆಗಳು ಇರುವ ಸ್ಥಳಕ್ಕೆ ಇರುವ ಸುಮಾರು 2 ಕಿ.ಮೀ. ಉದ್ದದ ರಸ್ತೆ ಕೆಸರುಮಯವಾಗಿರುವುದರಿಂದ ಪ್ರವಾಸಿಗರಿಗೆ ಅನಾನುಕೂಲವಾಗಿದ. ಈ ರಸ್ತೆಯನ್ನು ಸರಿಪಡಿಸುವುದು ಮತ್ತು ಸಫಾರಿ ವಾಹನವೊಂದನ್ನು ಮಾಡುವ ಕುರಿತು ಚರ್ಚಿಸಲಾಯಿತು; ಮತ್ತು ಪ್ರವೇಶ ದ್ವಾರದ ಮುಂಭಾಗ ಇನ್ನಷ್ಟು ಅಭಿವೃದ್ಧಿಪಡಿಸುವುದು ಹಾಗೂ ಇನ್ನಷ್ಟು ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.
ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರ ಗಮನಕ್ಕೆ ತಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಭಾಸ್ಕರ್ ನಾಯಕ್ ತಿಳಿಸಿದರು.
ಹುಲುಗುಂದ ಶಾಲೆಗೆ ಭೇಟಿ: ತಾಲೂಕು ಶಿಕ್ಷಣಾಧಿಕಾರಿ ಸುರೇಶ್ ಅವರೊಂದಿಗೆ ಹುಲುಗುಂದ ಶಾಲೆಗೆ ಬೇಟಿ ನೀಡಿದ ಭಾಸ್ಕರ ನಾಯಕ್, ಶಾಲೆಗೆ ಹೆಚ್ಚುವರಿ ಶಿಕ್ಷಕರ ಅವಶ್ಯಕತೆ ಇರುವ ಬಗ್ಗೆ ಗಮನಸೆಳೆದರು.
ಇದಕ್ಕೆ ಸ್ಪಂದಿಸಿದ ಸುರೇಶ್ ಅವರು ತಕ್ಷಣವೇ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಕೊಡುವುದಾಗಿ ಭರವಸೆ ನೀಡಿದರು. ಮತ್ತು ಶಾಲೆಯ ಮೇಲ್ಛಾವಣಿಯನ್ನು ಆದಷ್ಟು ಶೀಘ್ರ ದುರಸ್ತಿ ಮಾಡಿಕೊಡುವಂತೆ ಒತ್ತಾಯಿಸಿದರು.
ಈ ಸಂದರ್ಭ ಪಂಚಾಯಿತಿ ಸದಸ್ಯ ಮಣಿಕಂಠ, ಶಾಲೆಯ ಮುಖ್ಯ ಶಿಕ್ಷಕ ತಮ್ಮಯ್ಯ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.