ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಇತ್ತ ದರ್ಶನ್ ಜೈಲು ಸೇರುವ ಕೆಲ ದಿನಗಳ ಹಿಂದಷ್ಟೆ ನಟಿ ರಮ್ಯಾ, ದರ್ಶನ್ ಪ್ರಕರಣದ ಬಗ್ಗೆ ಆಡಿದ್ದ ಮಾತಿನಿಂದಾಗಿ ದರ್ಶನ್ ಅಭಿಮಾನಿಗಳಿಂದ ತೀವ್ರ ನಿಂದನೆ ಎದುರಿಸಿದ್ದರು. .ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದರ. ಅದರ ಬೆನ್ನಲ್ಲೆ ಕೆಲವರ ಬಂಧನವೂ ಆಯ್ತು. ಇದೀಗ ರಮ್ಯಾ ಎಣಿಸಿದ್ದಂತೆ ಮತ್ತೆ ದರ್ಶನ್ ಬಂಧನವಾಗಿದೆ. ಆದರೆ ಇದು ರಮ್ಯಾಗೆ ಬೇಸರವೇ ಆಗಿದೆಯಂತೆ.
ದರ್ಶನ್ ಜಾಮೀನು ರದ್ದಾದ ಬಗ್ಗೆ ದೀರ್ಘವಾದ ಆಡಿಯೋ ಸಂದೇಶವನ್ನು ರಮ್ಯಾ ಹಂಚಿಕೊಂಡಿದ್ದು, ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ನನಗೆ ಮಿಶ್ರ ಪ್ರತಿಕ್ರಿಯೆ ಉಂಟಾಯ್ತು, ಮೊದಲಿಗೆ ತುಸು ಬೇಜಾರು ಸಹ ಆಯ್ತು ಏಕೆಂದರೆ ದರ್ಶನ್ ನನಗೆ ಗೊತ್ತಿರುವವರು, ಅವರೊಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ಅವರ ಜೀವನ ಅವರು ಹಾಳು ಮಾಡಿಕೊಂಡರು ಎಂಬುದು ನನಗೆ ಬೇಜಾರು ತರಿಸಿದೆ. ನಾವು ಒಟ್ಟಿಗೆ ಕೆಲಸ ಮಾಡುವಾಗ ಕೆಲವು ವಿಷಯಗಳನ್ನು ಅವರು ನನ್ನೊಟ್ಟಿಗೆ ಹಂಚಿಕೊಂಡಿದ್ದರು. ಚಿತ್ರರಂಗದಲ್ಲಿ ಈ ಹಂತಕ್ಕೆ ಬೆಳೆಯಲು ತಾವು ಪಟ್ಟ ಕಷ್ಟಗಳನ್ನು ಅವರು ನನ್ನ ಬಳಿ ಹೇಳಿಕೊಂಡಿದ್ದರು. ಅದನ್ನೆಲ್ಲ ಕೇಳಿ ನನಗೆ ಅವರ ಬಗ್ಗೆ ಬಹಳ ಹೆಮ್ಮೆ ಇತ್ತು ಎಂದಿದ್ದಾರೆ.
ಆದರೆ ಇತ್ತೀಚೆಗೆ ಅವರ ನಡವಳಿಕೆಗಳನ್ನು ನೋಡಿ ತುಸು ಬೇಸರ ಆಗಿತ್ತು. ಅವರ ಅಕ್ಕ-ಪಕ್ಕ ಯಾರೂ ಒಳ್ಳೆಯವರು ಇಲ್ಲವೇನೋ ಗೊತ್ತಿಲ್ಲ. ಅವರನ್ನು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗುವವರು ಇರಲಿಲ್ಲ ಅನಿಸುತ್ತದೆ. ಒಬ್ಬ ವ್ಯಕ್ತಿ ಒಂದು ಹಂತಕ್ಕೆ ಏರಿದ ಬಳಿಕ ಒಳ್ಳೆಯ ಸಲಹೆಗಾರರು ಅಕ್ಕ-ಪಕ್ಕ ಇರಲೇ ಬೇಕು, ಇಲ್ಲವಾದರೆ ಹಾದಿ ತಪ್ಪಿ ಬಿಡುತ್ತಾರೆ ಎಂದಿದ್ದಾರೆ ರಮ್ಯಾ.